
ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ರಹಿತರಿಗೆ ₹101 ಕೋಟಿಗಳಲ್ಲಿ ಸುಸಜ್ಜಿತ ಬಡಾವಣೆ ನಿರ್ಮಿಸಲು ಮಂಗಳವಾರ ನಡೆದ ಬಜೆಟ್ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಬಡಾವಣೆ ನಿರ್ಮಾಣಕ್ಕೆ ಜಾಗವನ್ನು ಗುರುತಿಸಿ ಶೀಘ್ರವೇ ಕಾರ್ಯರೂಪಕ್ಕೆ ತರಲು ಸಭೆಯು ಒಪ್ಪಿಗೆ ಸೂಚಿಸಿತು.
ಒಟ್ಟು ₹1.3 ಕೋಟಿಗಳ ಉಳಿತಾಯ ಬಜೆಟ್ ಅನ್ನು ಮಂಡಿಸಲಾಯಿತು. ಪಿ.ಬಿ. ರಸ್ತೆಯಲ್ಲಿ ಅಳವಡಿಸಲಾಗಿರುವ ವಿದ್ಯುದ್ದೀಪಗಳನ್ನು ಡಿಸಿಎಂ ಬಳಿಯಿಂದ ಬಾಡಾ ಕ್ರಾಸ್ವರೆಗೆ, ಬಾತಿ ಕೆರೆಯಿಂದ ಮೊದಲ ರೈಲ್ವೆ ಲೆವೆಲ್ ಕ್ರಾಸ್ವರೆಗೆ ವಿಸ್ತರಿಸಲು, ನಗರದ ವೃತ್ತಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಯಿತು.
ಈಗಿರುವ ರಿಂಗ್ ರಸ್ತೆಯನ್ನು ಬೇತೂರಿನಿಂದ ಬೈಪಾಸ್ ವರೆಗೆ ಅಭಿವೃದ್ಧಿಪಡಿಸುವ ಸಂಬಂಧ ಡಿಪಿಆರ್ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನಿಡಲಾಯಿತು.
ಸಚಿವ–ಶಾಸಕರ ನಡುವೆ ಮಾತಿನ ಚಕಮಕಿ
ಕೆಲವೊಂದು ಲೇಔಟ್ಗೆ ಅನುಮೋದನೆ ನೀಡುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಹರಿಹರ ಶಾಸಕ ಬಿ.ಪಿ.ಹರೀಶ್ ನಡುವೆ ಏಕವಚನದಲ್ಲಿ ವಾಗ್ವಾದ ನಡೆಯಿತು ಎಂದು ಮೂಲಗಳು ತಿಳಿಸಿವೆ.
‘ಧೂಡಾದಲ್ಲಿ ನಾನು ಒಬ್ಬ ಸದಸ್ಯನಿದ್ದೇನೆ. ನಿಯಮಗಳನ್ನು ಗಾಳಿಗೆ ತೂರಿ ಕೆಲವೊಂದು ಲೇಔಟ್ಗೆ ಅಪ್ರೂವಲ್ ಪಡೆಯಲಾಗಿದೆ. ಲೇಔಟ್ಗೆ ಅನುಮೋದನೆ ನೀಡುವ ವಿಚಾರ ಧೂಡಾ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಬೇಕಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ’ ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಆರೋಪಿಸಿದರು.
‘ನಿಂದೇನಾದ್ರೂ ತಕಾರರು ಇದ್ದರೆ ಬರೆದುಕೊಡು. ನನಗೆ ಬೇರೆ ಕೆಲಸವಿದೆ’ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದಾಗ, ‘ನಾವು ಕೆಲಸವಿಲ್ಲದೇ ಇಲ್ಲಿಗೆ ಬಂದಿದ್ದೇವಾ‘ ಎಂದು ಶಾಸಕರು ತಿರುಗೇಟು ನೀಡಿದರು.
‘ಧೂಡಾದಲ್ಲಿ ಭ್ರಷ್ಟಾಚಾರ ನಡೆದಿದೆ. ಅಧ್ಯಕ್ಷರೂ ಇದರಲ್ಲಿ ಪಾಲುದಾರರಾಗಿದ್ದಾರೆ’ ಎಂದು ಶಾಸಕರು ಆರೋಪಿಸಿದರು.
‘ಐದು ವರ್ಷ ನೀವು ಲೂಟಿ ಹೊಡೆದಿದ್ದೀರಿ’ ಎಂದು ಮಲ್ಲಿಕಾರ್ಜುನ್ ತಿರುಗೇಟು ನೀಡಿದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.