ADVERTISEMENT

ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ವ್ಯತ್ಯಾಸ: ಶಾಸಕ ಎಸ್‍. ರಾಮಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 3:41 IST
Last Updated 14 ಜುಲೈ 2021, 3:41 IST
ಹರಿಹರದ ಬೆಂಕಿನಗರದಲ್ಲಿ ಶಾಸಕ ಎಸ್‍. ರಾಮಪ್ಪ ಪರಿಹಾರದ ಚೆಕ್‍ ವಿತರಿಸಿದರು.
ಹರಿಹರದ ಬೆಂಕಿನಗರದಲ್ಲಿ ಶಾಸಕ ಎಸ್‍. ರಾಮಪ್ಪ ಪರಿಹಾರದ ಚೆಕ್‍ ವಿತರಿಸಿದರು.   

ಹರಿಹರ: ಸರ್ಕಾರ ಹಾಗೂ ಜಿಲ್ಲಾಡಳಿತ ಕೋವಿಡ್‍ನಿಂದ ಮರಣ ಹೊಂದಿರುವವರ ಸಂಖ್ಯೆಯನ್ನು ಮರೆಮಾಚಿದೆ ಎಂದು ಶಾಸಕ ಎಸ್‍. ರಾಮಪ್ಪ ಆರೋಪಿಸಿದರು.

ನಗರದ ಬೆಂಕಿನಗರದಲ್ಲಿ ಕೋವಿಡ್‍ನಿಂದ ನೊಂದ ಕುಟುಂಬಗಳಿಗೆ ತಾಲ್ಲೂಕು ಬ್ಲಾಕ್‍ ಕಾಂಗ್ರೆಸ್‍ ವತಿಯಿಂದ ನೆರವಾಗುವ ‘ಸಹಾಯ ಹಸ್ತ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೋವಿಡ್‍ನಿಂದ ಜಿಲ್ಲೆಯಲ್ಲಿ ಮೃತಪಟ್ಟವರ ನೈಜ ಸಂಖ್ಯೆಯನ್ನು ಜಿಲ್ಲಾಡಳಿತ ಮುಚ್ಚಿಟ್ಟಿರುವ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳು ಪರಿಹಾರ ಪಡೆಯಲು ಪರದಾಡುವಂತಾಗಿದೆ. ಈ ಕಾರಣದಿಂದ ಸಂತ್ರಸ್ತರ ಸರ್ವೆ ನಡೆಸಲು ಪಕ್ಷದಿಂದ ಬೂತ್‍ಮಟ್ಟದ ಸಮಿತಿ ರಚಿಸಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಕೋವಿಡ್‍ ಪರಿಹಾರ ಪಡೆಯಲು ಸರ್ಕಾರ ಅನೇಕ ಕಾನೂನುಗಳನ್ನು ರಚಿಸಿದೆ. ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಪರಿಹಾರ ವಿತರಿಸಲು ತಿಳಿಸಿದೆ. ನೋವುಂಡ ಕುಟುಂಬಗಳಿಗೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಅಗತ್ಯ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‍ ರಾಜ್ಯ ವಕ್ತಾರ, ಕಾಂಗ್ರೆಸ್‍ ಕೇಂದ್ರ ಸಮಿತಿ ನಿರ್ದೇಶನದ ಮೇರೆಗೆ ಕೋವಿಡ್‍ ಸಂತ್ರಸ್ತ ಪ್ರತಿ ಕುಟುಂಬವನ್ನೂ ಭೇಟಿ ಮಾಡುತ್ತೇವೆ. ಸಾವಿಗೀಡಾದ ಪ್ರತಿಯೊಬ್ಬರಿಗೂ ₹ 5 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ನಗರಸಭೆ ಸದಸ್ಯ ಸೈಯದ್‍ ಅಬ್ದುಲ್‍ ಅಲೀಂ, ಕೆಪಿಸಿಸಿ ಸಂಯೋಜಕ ಕುಮಾರ್‍, ನಗರ ಬ್ಲಾಕ್‍ ಘಟಕ ಅಧ್ಯಕ್ಷ ಎಲ್‍.ಬಿ. ಹನುಮಂತಪ್ಪ, ಗ್ರಾಮಾಂತರ ಬ್ಲಾಕ್‍ ಘಟಕದ ಅಧ್ಯಕ್ಷ ಎಂ.ಬಿ. ಆಬಿದ್ ಅಲಿ, ಎಪಿಎಂಸಿ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಮಂಜುನಾಥ್‍ ಪಟೇಲ್‍, ಮುಂಖಡರಾದ ರೇವಣಸಿದ್ದಪ್ಪ, ಕೆ.ಪಿ. ಗಂಗಾಧರ್‍, ಪಾರ್ವತಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.