ADVERTISEMENT

ಬಿತ್ತನೆ ಬೀಜ, ಗೊಬ್ಬರ ವಿತರಿಸಿ: ಶಾಸಕ ಎಸ್‍. ರಾಮಪ್ಪ ಸಲಹೆ

ಅಧಿಕಾರಿಗಳಿಗೆ ಶಾಸಕ ಎಸ್‍. ರಾಮಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 4:29 IST
Last Updated 4 ಜೂನ್ 2021, 4:29 IST
ಹರಿಹರ ರೈತ ಸಂಪರ್ಕ ಕೇಂದ್ರಕ್ಕೆ ಗುರುವಾರ ಶಾಸಕ ಎಸ್‍. ರಾಮಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಹರಿಹರ ರೈತ ಸಂಪರ್ಕ ಕೇಂದ್ರಕ್ಕೆ ಗುರುವಾರ ಶಾಸಕ ಎಸ್‍. ರಾಮಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಹರಿಹರ: ರೈತರ ಕೃಷಿ ಚಟುವಟಿಕೆಗೆ ಅಗತ್ಯವಾದ ಬಿತ್ತನೆ ಬೀಜ, ಗೊಬ್ಬರ, ಕಳೆನಾಶಕ, ಯಂತ್ರೋಪಕರಣಗಳನ್ನು ಸೂಕ್ತ ಸಮಯದಲ್ಲಿ ವಿತರಿಸಬೇಕು ಎಂದು ಶಾಸಕ ಎಸ್‍. ರಾಮಪ್ಪ ಕೃಷಿ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದರು.

ನಗರದ ರೈತ ಸಂಪರ್ಕ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

ಪ್ರಸ್ತುತ ಮುಂಗಾರಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಇಲಾಖೆಯಿಂದ ರೈತರಿಗೆ ಸಹಾಯಧನದ ದರದಲ್ಲಿ ಬೀಜ ಹಾಗೂ ಗೊಬ್ಬರ ವಿತರಿಸುವ ಕಾರ್ಯದಲ್ಲಿ ವಿಳಂಬವಾಗಬಾರದು. ಮೆಕ್ಕೆಜೋಳದ ಜತೆಗೆ ಅಕ್ಕಡಿ ಬೆಳೆಗೆ ಪೂರಕ ಬೀಜಗಳನ್ನು ವಿತರಿಸಬೇಕು. ಜಿಂಕ್‍, ಕಳೆನಾಶಕಗಳು, ಬಾಡಿಗೆ ಹಾಗೂ ಸಹಾಯಧನದಲ್ಲಿ ನೀಡುವ ಕೃಷಿ ಯಂತ್ರೋಪಕರಣಗಳನ್ನು ಸರ್ಕಾರದಿಂದ ತರಿಸಿ ವಿತರಿಸುವಂತೆ ಸೂಚಿಸಿದರು.

ADVERTISEMENT

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗೋವರ್ಧನ್, ‘ಕೇಂದ್ರದಲ್ಲಿ ಸಬ್ಸಿಡಿ ದರದಲ್ಲಿ ಮೆಕ್ಕೆಜೋಳ, ತೊಗರಿ, ಹಲಸಂದೆ ಬೀಜಗಳನ್ನು ವಿತರಿಸಲಾಗುತ್ತಿದೆ. ಪ್ರಸ್ತುತ 4,500 ಟನ್‍ ಯೂರಿಯಾ ಗೊಬ್ಬರ ದಾಸ್ತಾನು ಸಂಗ್ರಹಿಸಲಾಗಿದೆ. ಮೆಕ್ಕೆಜೋಳ ಬೀಜಕ್ಕೆ ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಕೆ.ಜಿಗೆ ₹ 20 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಸಬ್ಸಿಡಿ ಹಾಗೂ 4 ಕೆ.ಜಿ. ತೊಗರಿ ಬೀಜಗಳನ್ನು ವಿತರಿಸಲಾಗುತ್ತಿದೆ. ಪ್ರಸ್ತುತ ತಾಲ್ಲೂಕಿನಲ್ಲಿ ಬೇಡಿಕೆಯ ಎನ್‍.ಕೆ. ಸಿ.ಪಿ. ಪ್ರೋಲೈನ್‍ ಹಾಗೂ ಕಾವೇರಿ ಬೀಜಗಳನ್ನು ವಿತರಿಸಲಾಗುತ್ತಿದೆ’ ಎಂದು ತಿಳಿಸಿದರು.

ಕೇಂದ್ರದಲ್ಲಿ ದ್ರಾವಣ ರೂಪದ ಜಿಂಕ್‍ ಲಭ್ಯವಿದ್ದು, ಪುಡಿ ರೂಪದ ಜಿಂಕ್ ಹಾಗೂ ಕಳೆ ನಾಶಕ ಪೂರೈಕೆಯಾಗಲಿದೆ. ಮಲೇಬೆನ್ನೂರು ಹೋಬಳಿಯ ರೈತ ಕೇಂದ್ರದಲ್ಲಿ ಕೃಷಿ ಯಂತ್ರಗಳು ಬಾಡಿಗೆ ಆಧಾರದ ಮೇಲೆ ಲಭ್ಯವಿದೆ ಎಂದು ಮಾಹಿತಿ
ನೀಡಿದರು.

ನಗರಸಭೆ ಸದಸ್ಯ ಸೈಯದ್‍ ಅಲೀಂ, ಕೃಷಿ ಇಲಾಖೆ ಅಧಿಕಾರಿ ಪ್ರಸಾದ್, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಹದೇವಗೌಡ, ಮುಖಂಡರಾದ ಹನುಮಂತಪ್ಪ, ಜಯಣ್ಣ, ವಿಜಯ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.