ದಾವಣಗೆರೆ: ಜಿಲ್ಲೆಯ 3.81 ಲಕ್ಷ ಕುಟುಂಬಗಳಿಗೆ ಶುಕ್ರವಾರದಿಂದ ಎರಡು ತಿಂಗಳ ಪಡಿತರ ವಿತರಣೆ ಆರಂಭವಾಗಿದೆ.
‘ಬಿಪಿಎಲ್ ಕಾರ್ಡ್ಗಳಲ್ಲಿರುವ ಪ್ರತಿಯೊಬ್ಬ ಸದಸ್ಯನಿಗೆ (ಯುನಿಟ್ಗೆ) ತಲಾ 10 ಕೆ.ಜಿಯಂತೆ (ಎರಡು ತಿಂಗಳಿಗೆ) ಹಾಗೂ ಪ್ರತಿಯೊಂದು ಅಂತ್ಯೋದಯ ಕಾರ್ಡ್ಗಳಿಗೆ ಒಟ್ಟು 70 ಕೆ.ಜಿ ಅಕ್ಕಿ ಹಂಚಿಕೆ ಕಾರ್ಯ ನಡೆಯುತ್ತಿದೆ' ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಲಾಕ್ಡೌನ್ ಆಗಿದ್ದರಿಂದ ಫಲಾನುಭವಿಗಳಿಗೆ ಎರಡು ತಿಂಗಳ ಪಡಿತರ ಏಕಕಾಲಕ್ಕೆ ವಿತರಿಸುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿದ್ದು, ಅದರಂತೆ ವಿತರಣೆ ಕಾರ್ಯ ನಡೆಯುತ್ತಿದೆ. ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ ಎರಡು ತಿಂಗಳ ಒಟ್ಟು 4 ಕೆ.ಜಿ (ತಿಂಗಳಿಗೆ 2 ಕೆ.ಜಿ) ಗೋಧಿ ಕೂಡಾ ವಿತರಿಸಲಿದ್ದು, ಆದರೆ ರಾಜ್ಯ ಸರ್ಕಾರ ಘೋಷಿಸಿರುವ ತಲಾ 1 ಕೆ.ಜಿ ತೊಗರಿ ಬೇಳೆಯ ಎತ್ತುವಳಿ ಕಾರ್ಯ ಈ ತಿಂಗಳು ನಡೆಯಲಿದ್ದು, ಮುಂದಿನ ತಿಂಗಳಿನಿಂದ ವಿತರಣೆ ನಡೆಯಲಿದೆ’ ಎಂದು ಹೇಳುತ್ತಾರೆ
ಬೇರೆ ಜಿಲ್ಲೆ, ರಾಜ್ಯದವರೂ ಪಡಿತರ ಪಡೆಯಲು ಅವಕಾಶ
‘ಕೋವಿಡ್–19 ಭೀತಿಯ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನ್ಯಾಯಬೆಲೆ ಅಂಗಡಿಗಳ ಮುಂದೆ ಗುರುತುಗಳನ್ನು ಮಾಡಲಾಗಿದೆ. ಅಲ್ಲದೇ ಸ್ಯಾನಿಟೈಸರ್ ಹಾಗೂ ನೀರು ಹಾಗೂ ಸೋಪನ್ನು ಇಡಲಾಗಿದೆ. ಬೇರೆ ಜಿಲ್ಲೆಯವರೂ ಅನ್ಯ ರಾಜ್ಯದವರಿಗೂ ಪಡಿತರ ಪಡೆಯಲು ಕಲ್ಪಿಸಲಾಗಿದ್ದು, ಯಾರೊಬ್ಬರಿಗೂ ಪಡಿತರ ಇಲ್ಲ ಎಂದು ಹೇಳುವುದಿಲ್ಲ’ ಎಂದು ಮಂಟೇಸ್ವಾಮಿ ಹೇಳುತ್ತಾರೆ.
‘ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 7ರಿಂದ ಸಂಜೆ 8 ಗಂಟೆಯವರೆಗೂ, ಭಾನುವಾರದ ದಿವಸವೂ ಪಡಿತರ ವಿತರಿಸಲಿದ್ದು, ಏಪ್ರಿಲ್ ತಿಂಗಳ ಕೊನೆಯವರೆಗೂ ಪಡಿತರ ಪಡೆಯಬಹುದು. ಅಂಗಡಿಯ ಮುಂದೆ ಒಂದು ಬಾರಿಗೆ ಗುರುತು ಮಾಡಿದ ಸ್ಥಳದಲ್ಲಿ 10 ಮಂದಿ ನಿಲ್ಲಬಹುದು. ಅವರು ಮುಗಿದ ನಂತರ ಮತ್ತೆ 10 ಜನ ಮಂದಿ ತೆಗೆದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿವಸ 50ರಿಂದ 70 ಮಂದಿ ಯಾವುದೇ ಗೊಂದಲವಿಲ್ಲದಂತೆ ಪಡಿತರ ಪಡೆಯಬಹುದು’ ಎಂದು ಹೇಳುತ್ತಾರೆ.
====
ಅಂಕಿ ಅಂಶ
3.80 ಲಕ್ಷ
ಕುಟುಂಬಗಳು ಪಡಿತರ ಪಡೆಯಲಿವೆ
350
ಜಿಲ್ಲೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳು
120
ನಗರದಲ್ಲಿರುವ ನ್ಯಾಯಬೆಲೆ ಅಂಗಡಿಗಳು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.