ADVERTISEMENT

3ನೇ ಅಲೆ ನಿರ್ವಹಣೆ ಸಿದ್ಧತೆ ವೀಕ್ಷಿಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 5:18 IST
Last Updated 4 ಆಗಸ್ಟ್ 2021, 5:18 IST
ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸಿದ್ದಪಡಿಸುತ್ತಿರುವ ಆಮ್ಲಜನಕ ಘಟಕವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಸರ್ಜನ್‌ ಡಾ. ಜಯಪ್ರಕಾಶ್‌, ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಿದರು
ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸಿದ್ದಪಡಿಸುತ್ತಿರುವ ಆಮ್ಲಜನಕ ಘಟಕವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಸರ್ಜನ್‌ ಡಾ. ಜಯಪ್ರಕಾಶ್‌, ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಿದರು   

ದಾವಣಗೆರೆ: ಕೋವಿಡ್-19 ಸಂಭಾವ್ಯ 3ನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತೆ ದೃಷ್ಟಿಯಿಂದ ವೈದ್ಯಕೀಯ ಪರಿಣಿತ ಸಮಿತಿಯೊಂದಿಗೆ ಚರ್ಚಿಸಿ, ಬೇಕಾದ ಎಲ್ಲಾ ವೈದ್ಯಕೀಯ ಸಲಕರಣೆಗಳು, ಮಾನವ ಸಂಪನ್ಮೂಲಗಳು ಸೇರಿ ಎಲ್ಲ ಬಗೆಯ ಸೌಕರ್ಯಗಳೊಂದಿಗೆ ಸಜ್ಜುಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಮಂಗಳವಾರ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ ಒಂದು ಆಮ್ಲಜನಕ ಜನರೇಷನ್ ಪ್ಲಾಂಟ್‍ ಇದೆ. ಅವುಗಳು ಸಂಪೂರ್ಣ ಕೆಲಸ ನಿರ್ವಹಿಸಬೇಕೆಂದರೆ ಪವರ್ ಬ್ಯಾಕಪ್ ಬೇಕು. 250 ಕೆ.ಬಿ ಟ್ರಾನ್ಸ್‌ಫಾರ್ಮರ್ ಅನ್ನು ಆಗಸ್ಟ್ 15 ರೊಳಗಾಗಿ ಅಳವಡಿಸಬೇಕು. ಸಿಜಿ ಆಸ್ಪತ್ರೆಯಲ್ಲಿ 6 ಕೆಎಲ್ ಪ್ಲಾಂಟ್ ಇದ್ದು ಎಂಐಸಿಯು ಹಾಗೂ ವಿಐಸಿಯುಗೆ ಪ್ರೆಶರ್ ಸಾಕಾಗುವುದಿಲ್ಲ ಎಂದು ಎಂದು ಸಿಲಿಂಡರ್‌ಗಳ ಬಳಕೆ ಮಾಡುತ್ತಿದ್ದರು. ನಂತರ ತಜ್ಞರ ಸಲಹೆಯ ಮೇರೆಗೆ ಮ್ಯಾನಿಫೋಲ್ಡ್ ನಿಂದ ಬೇರ್ಪಡಿಸಿ ಎಲೆಮೋ ಪ್ಲಾಂಟ್ ಮೂಲಕ ನೇರವಾಗಿ ಸಂಪರ್ಕ ನೀಡಿಲಾಗಿದೆ ಎಂದು ವಿವರಿಸಿದರು.

ADVERTISEMENT

ಪಿಎಂ ಕೇರ್ಸ್‌ ಅನುದಾನದಿಂದ ತಲಾ ಒಂದು ಸಾವಿರದ 2 ಯೂನಿಟ್ ಎಲ್.ಪಿ.ಎಂ ಆಮ್ಲಜನಕ ಜನರೇಟರ್ ಪ್ಲಾಂಟ್ ಬಂದಿದ್ದು, ಇದರ ಕಾಮಗಾರಿಗಳು ಆ.9 ರೊಳಗಾಗಿ ಮುಗಿಸಿ ಮ್ಯಾನಿಫೋಲ್ಡ್ ಗೆ ನೇರವಾಗಿ ಕನೆಕ್ಟ್ ಮಾಡುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಇಎಸ್‍ಐ ಆಸ್ಪತ್ರೆಗೆ ಪಿಎಂ ಕೇರ್ಸ್ ವತಿಯಿಂದ 500 ಲೀಟರ್ ಆಮ್ಲಜನಕ ಜನರೇಟರ್ ಪ್ಲಾಂಟ್ ಬಂದಿದ್ದು, ಇದು ಕೂಡ ಸಜ್ಜಾಗುತ್ತಿದೆ ಎಂದು ಮಾಹಿತಿ ನೀಡಿದರು.

ಆಸ್ಪತ್ರೆಯ 65 ಹಾಗೂ 66 ವಾರ್ಡ್‌ಗಳಲ್ಲಿ 36 ಬೆಡ್ ಸಾಮರ್ಥ್ಯದ ಮಕ್ಕಳ ಐ.ಸಿ.ಯು ಗಳನ್ನು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಈ ಹಿಂದೆ ಬಳಸಿದ ಎಲ್ಲಾ ಮಾನಿಟರ್ಸ್, ವೆಂಟಿಲೇಟರ್ಸ್, ಫ್ಲೋ ಮೀಟರ್ಸ್ ಗಳು, ಆಕ್ಸಿಜನ್ ಪೈಪ್‍ಲೈನ್ಸ್ ಸೇರಿದಂತೆ ಎಲ್ಲಾ ಸಲಕರಣೆಗಳನ್ನು ಸುಸಜ್ಜಿತವಾಗಿ ಸಿದ್ಧತೆ ಮಾಡಿಟ್ಟುಕೊಳ್ಳಬೇಕು ಎಂದು ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್‍ಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ‘ದೇವಸ್ಥಾನಗಳಲ್ಲಿ ಶನಿವಾರ ಹಾಗೂ ಭಾನುವಾರ ದರ್ಶನಕ್ಕೆ ನಿಷೇಧವಿದೆ. ಮಾರುಕಟ್ಟೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಯಾವುದೇ ನಿಯಮಗಳನ್ನು ಮೀರಿದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.