ADVERTISEMENT

ಹಲ್ಲೆ ಖಂಡಿಸಿ ವೈದ್ಯರ ಪ್ರತಿಭಟನೆ

ಸಂಜೆ 5ರವರೆಗೆ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್‌

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 17:45 IST
Last Updated 8 ನವೆಂಬರ್ 2019, 17:45 IST
ಬಾಪೂಜಿ ಆಸ್ಪತ್ರೆಯ ವೈದ್ಯರು ದಾವಣಗೆರೆಯ ಬಾಪೂಜಿ ಹೊರ ರೋಗಿಗಳ ವಿಭಾಗದ ಮುಂಭಾಗದಲ್ಲಿ ಇತ್ತಿಚೆಗೆ ನಡೆದ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಬಾಪೂಜಿ ಆಸ್ಪತ್ರೆಯ ವೈದ್ಯರು ದಾವಣಗೆರೆಯ ಬಾಪೂಜಿ ಹೊರ ರೋಗಿಗಳ ವಿಭಾಗದ ಮುಂಭಾಗದಲ್ಲಿ ಇತ್ತಿಚೆಗೆ ನಡೆದ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಬೆಂಗಳೂರಿನ ಮಿಂಟೊ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ಈಚೆಗೆ ನಡೆದ ಹಲ್ಲೆ ಖಂಡಿಸಿ ಐಎಎಂ ಜಿಲ್ಲಾ ಘಟಕ ಹಾಗೂ ಕಿರಿಯ ವೈದ್ಯರ ಸಂಘದ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ವೈದ್ಯರು ಪ್ರತಿಭಟನೆ ನಡೆಸಿದರು.

ನಗರದ ಬಾಪೂಜಿ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದ ವೈದ್ಯರು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕರ್ತವ್ಯ ನಿರತ ವೈದ್ಯರ ಮೇಲಿನ ಹಲ್ಲೆ ಖಂಡನೀಯ ಕೂಡಲೇ ಹಲ್ಲೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ವೈದ್ಯರಿಗೆ ರಕ್ಷಣೆ ಒದಗಿಸಬೇಕು. ಇಂತಹ ಘಟನೆಗಳು ವೈದ್ಯರ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಇದರಿಂದ ಸಮರ್ಪಕವಾಗಿ ಕೆಲಸ ನಿರ್ವಹಿಸಲು ತೊಂದರೆಯಾಗುತ್ತದೆ. ಕೆಲಸ ಮಾಡುವ ಸ್ಥಳಗಳಲ್ಲಿ ಸುರಕ್ಷಿತ ವಾತಾವರಣ ಸೃಷ್ಟಿಸಬೇಕು. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಭಯಮುಕ್ತ ವಾತಾವರಣ ನಿರ್ಮಿಸಬೇಕು. ಹೆಚ್ಚಿನ ಭದ್ರತೆ ಕಲ್ಪಿಸಬೇಕು. ರೋಗಿಗಳ ಜೊತೆ ಇರಲು ಇಬ್ಬರಿಗೆ ಮಾತ್ರ ಅವಕಾಶ ನೀಡುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಬೇಕು. ವೈದ್ಯರ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಬೇಕು. ವೈದ್ಯಕೀಯ ಭದ್ರತಾ ಕಾಯ್ದೆ ಅನ್ವಯ ಹಲ್ಲೆ ನಡೆಸಿದವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಬೇಕು. ವೈದ್ಯರ ಜೊತೆ ಅನುಚಿತ ವರ್ತನೆ ಮಾಡಿದವರಿಗೆ ವೈದ್ಯರು ಚಿಕಿತ್ಸೆ ನಿರಾಕರಿಸಬಹುದು. ವೈದ್ಯರ ಮೇಲೆ ದಿನೇ ದಿನೇ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದು, ಜನರಿಗೆ ಉತ್ತಮ ಶಿಕ್ಷಣ ನೀಡಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಗಣೇಶ್ ಸಿ. ಇಡಗುಂಜಿ, ಡಾ. ಮಧು ಎಸ್‌. ಪೂಜಾರ್‌, ಡಾ. ಅಶ್ವಿನಿ ಎಸ್‌., ಡಾ. ಅನುರಾಧ ಎಸ್‌.ಎನ್‌., ಡಾ. ಮಂಜುನಾಥ ಎಚ್‌.ಎ., ಡಾ. ಪ್ರಿಯದರ್ಶಿನಿ ಎಂ. ಬೇತೂರ್‌, ಡಾ. ಪ್ರತ್ಯಕ್ಷ ಪಿ. ವೈಷ್ಣವಿ, ಡಾ. ಪ್ರೇರಣಾ ಎ.ಟಿ. ಸೇರಿ ಐಎಎಂ ಜಿಲ್ಲಾ ಘಟಕದ ಸದಸ್ಯರು, ಕಿರಿಯ ವೈದ್ಯರ ಸಂಘದ ಸದಸ್ಯರು ಇದ್ದರು.

ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್‌:

ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳ ಒಪಿಡಿಯನ್ನು ಬೆಳಿಗ್ಗೆಯಿಂದ ಸಂಜೆ 5ರವರೆಗೆ ಬಂದ್‌ ಮಾಡಲಾಗಿತ್ತು.

ಬಾಪೂಜಿ ಆಸ್ಪತ್ರೆ, ಎಸ್‌. ಎಸ್‌. ಹೈಟೆಕ್‌ ಆಸ್ಪತ್ರೆ, ಸಿಟಿ ಸೆಂಟ್ರಲ್‌ ಆಸ್ಪತ್ರೆ ಸೇರಿ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್‌ ಮಾಡಲಾಗಿತ್ತು. ಆಸ್ಪತ್ರೆ ಆವರಣದಲ್ಲಿ ಈ ಬಗ್ಗೆ ಸೂಚನಾ ಫಲಕ ಹಾಕಲಾಗಿತ್ತು. ಒಪಿಡಿ ಹೊರತುಪಡಿಸಿ ಒಳರೋಗಿಗಳ ಘಟಕ, ತುರ್ತು ಚಿಕಿತ್ಸಾ ಘಟಕ ಎಂದಿನಂತೆ ಕಾರ್ಯನಿರ್ವಹಿಸಿದವು.

ನ. 9ರ ಬೆಳಿಗ್ಗೆ 6ರವರೆಗೆ ಒಪಿಡಿ ಬಂದ್‌ಗೆ ನಿರ್ಧರಿಸಿದ್ದ ವೈದ್ಯರು ಹಲ್ಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ ಕಾರಣ ಸಂಜೆ ವೇಳೆಗೆ ಬಂದ್ ವಾಪಸ್‌ ಪಡೆದರು. ಸಂಜೆ 5 ರ ನಂತರ ಆಸ್ಪತ್ರೆಗಳಲ್ಲಿ ಒಪಿಡಿ ಕಾರ್ಯನಿರ್ವಹಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.