ಹರಿಹರ: ಯುವ ಜನರನ್ನು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಈಗಿನ ದೊಡ್ಡ ಸವಾಲು ಎಂದು ದೊಡ್ಡಬಾತಿಯ ತಪೋವನ ಸಮೂಹ ಸಂಸ್ಥೆಗಳ ಅಧ್ಯಕ್ಷ ಶಶಿಕುಮಾರ್ ವಿ.ಮೆಹರ್ವಾಡೆ ಹೇಳಿದರು.
ಸಮೀಪದ ದೊಡ್ಡಬಾತಿಯ ತಪೋವನ ಸಂಸ್ಥೆಯಲ್ಲಿ ತಪೋವನ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ (ಎಸ್ಎಲ್ಸಿಎ) ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ನಶೆಮುಕ್ತ ಭಾರತ ಅಭಿಯಾನ-2025ರ ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಶಾಲೆ, ಕಾಲೇಜು, ಮನೆಪಾಠ, ಜಿಮ್, ಆಟದ ಮೈದಾನ ಅಥವಾ ದುಡಿಯಲು ಹೋಗುವ ಮಕ್ಕಳ ಸ್ನೇಹ ಬಳಗ ಹೇಗಿದೆ, ಅವರ ಹವ್ಯಾಸ, ಅಭ್ಯಾಸ ಹೇಗಿದೆ ಎಂದು ಪಾಲಕರು ಕಣ್ಣಿಡಬೇಕು. ದುಶ್ಚಟಗಳ ಅಭ್ಯಾಸ ಕಂಡು ಬಂದರೆ ಬುದ್ಧಿಹೇಳಿ ಸರಿಪಡಿಸಬೇಕು ಎಂದರು.
ಮಾದಕ ವಸ್ತುಗಳ ಮಾರಾಟ ಜಾಲ ಸುತ್ತಲಿನ ಪರಿಸರದಲ್ಲಿ ಸಕ್ರಿಯವಾಗಿದೆ. ಪೊಲೀಸರು ಕಠಿಣ ಕ್ರಮ ಜರುಗಿಸುತ್ತಿದ್ದು, ಪಾಲಕರು, ಹಿರಿಯರು, ವಿದ್ಯಾಸಂಸ್ಥೆಯವರು ನಿಗಾ ವಹಿಸುವ ಅಗತ್ಯವಿದೆ ಎಂದು ವಿವರಿಸಿದರು.
‘ವಿದ್ಯಾರ್ಥಿಗಳು ಓದುವ, ಯುವಕರು ದುಡಿಯುವ ಹಾಗೂ ವಿವಾಹಿತರು ಕುಟುಂಬವನ್ನು ಸಲಹುವುದರ ನಶೆ ಹೊಂದಿರಬೇಕು. ಕ್ಷಣಿಕ ಸುಖಕ್ಕೆ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು’ ಎಂದು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಇಲಾಖೆಯ ಅಧಿಕಾರಿ ಕೆ.ಕೆ.ಪ್ರಕಾಶ್ ಹೇಳಿದರು.
ಶಶಿಕುಮಾರ್ ವಿ. ಮೆಹರ್ವಾಡೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಬಿಎಎಂಎಸ್ ಕಾಲೇಜು ಪ್ರಾಚಾರ್ಯೆ ಡಾ.ಅಶ್ವಿನಿ ಕೆ.ಆರ್. ಸ್ವಾಗತಿಸಿದರು, ಮೆಡಿಕಲ್ ಡೈರೆಕ್ಟರ್ ಡಾ.ಪರಮೇಶ್ವರ ವಂದಿಸಿದರು. ವಿದ್ಯಾರ್ಥಿನಿ ಭೂಮಿಕ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.