ದಾವಣಗೆರೆ: ಇ–ನಾಮ್ (ನ್ಯಾಷನಲ್ ಎಗ್ರಿಕಲ್ಚರ್ ಮಾರ್ಕೆಟ್) ಆ್ಯಪ್ನಲ್ಲಿ ಜಿಲ್ಲೆಯ ಎಪಿಎಂಸಿಗಳೂ ನೋಂದಾಯಿಸಿಕೊಂಡರೆ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಇನ್ನಷ್ಟು ಸಿಗಲು ಸುಲಭವಾಗಲಿದೆ ಎಂಬುದು ರೈತರ ಒತ್ತಾಯವಾಗಿದೆ. ಕರ್ನಾಟಕದಲ್ಲಿ ರಾಷ್ಟ್ರೀಯ ಇ ಮಾರ್ಕೆಟ್ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್ ಎಂಬ ಆ್ಯಪ್ ಮೊದಲೇ ಇತ್ತು. ಅದುವೇ ಇ–ನಾಮ್ಗೆ ಮಾದರಿಯಾಗಿರುವುದು. ಹಾಗಾಗಿ ಅದರ ಅಗತ್ಯ ಇಲ್ಲ ಎಂದು ಜಾರಿ ಮಾಡಿಲ್ಲ ಎಂಬುದು ಎಪಿಎಂಸಿ ಅಧಿಕಾರಿಗಳ ಸಮರ್ಥನೆ.
ರಾಜ್ಯದಲ್ಲಿ 162 ಎಪಿಎಂಸಿಗಳಿವೆ. ಅದರಲ್ಲಿ ಚಿಂಚೋಳಿ ಮತ್ತು ಕಲಬುರ್ಗಿ ಎಪಿಎಂಸಿಗಳು ಮಾತ್ರ ಇ ನ್ಯಾಮ್ನಲ್ಲಿ ನೋಂದಣಿ ಮಾಡಿಕೊಂಡಿವೆ. ಉಳಿದ 160 ಎಪಿಎಂಸಿಗಳು ನೋಂದಾಯಿಸಿಕೊಂಡಿಲ್ಲ. ಎಲ್ಲ ಎಪಿಎಂಸಿಗಳು ನೋಂದಾಯಿಸಿಕೊಂಡರೆ ಆನ್ಲೈನ್ ಮಾರುಕಟ್ಟೆಗೆ ಉಪಯೋಗವಾಗುತ್ತದೆ ಎಂಬುದು ನ್ಯಾಮತಿಯ ಪ್ರಗತಿಪರ ರೈತ ಟಿ. ಶಿವರಾಜ್ ಅವರ ಅಭಿಪ್ರಾಯ.
ರಾಜ್ಯದ ಇ ಮಾರುಕಟ್ಟೆ ಜತೆಗೆ ಕೇಂದ್ರ ಮಾರುಕಟ್ಟೆಯೂ ದೊರತರೆ ರೈತರ ಮಾರುಕಟ್ಟೆ ಅವಕಾಶಗಳು ವಿಸ್ತಾರಗೊಳ್ಳುತ್ತವೆ ಎನ್ನುತ್ತಾರೆ ಅವರು.
ಕರ್ನಾಟಕದಲ್ಲಿ 2014ರಲ್ಲಿಯೇ ರಾಷ್ಟ್ರೀಯ ಇ ಮಾರ್ಕೆಟ್ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್ ಆರಂಭಗೊಂಡಿತ್ತು. ಇ ಪ್ಲಾಟ್ಫಾರ್ಮ್. ಕೇಂದ್ರ ಸರ್ಕಾರದ ಮಾರುಕಟ್ಟೆ ಅಧಿಕಾರಿಗಳು ರಾಜ್ಯಕ್ಕೆ ಬಂದು ಇದನ್ನು ಅಧ್ಯಯನ ಮಾಡಿ ದೇಶದ ಎಲ್ಲ ಕಡೆ ಇದೇ ಮಾದರಿಯಲ್ಲಿ ಇ ನ್ಯಾಮ್ ಜಾರಿಗೆ ತಂದರು. ರಾಷ್ಟ್ರೀಯ ಇ ಮಾರ್ಕೆಟ್ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್ನಲ್ಲಿ ಚಿಂಚೋಳಿ ಮತ್ತು ಕಲಬುರ್ಗಿ ಎಪಿಎಂಸಿಗಳು ನೋಂದಾಯಿಸಿಕೊಂಡಿರಲಿಲ್ಲ. ಹಾಗಾಗಿ ಅವೆರಡು ಇ ನ್ಯಾಮ್ನಲ್ಲಿ ನೋಂದಾಯಿಸಿಕೊಂಡಿವೆ. ದಾವಣಗೆರೆ ಎಪಿಎಂಸಿ ಮೊದಲೇ ರಾಷ್ಟ್ರೀಯ ಇ ಮಾರ್ಕೆಟ್ ಸರ್ವಿಸಸ್ನಲ್ಲಿ ಇರುವುದರಿಂದ ಇ ನ್ಯಾಮ್ ಅನುಷ್ಠಾನ ಮಾಡಿಲ್ಲ ಎಂದು ದಾವಣಗೆರೆ ಎಪಿಎಂಸಿ ಕಾರ್ಯದರ್ಶಿ ದೊರೆಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.