ಹೊನ್ನಾಳಿ: ಮೊಬೈಲ್ ಅಂಗಡಿಗೆ ಕನ್ನಹಾಕಿದ್ದ ನಾಲ್ವರು ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿ, ಕಳುವಾಗಿದ್ದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ವಶಪಡಿಸಿಕೊಡಿದ್ದಾರೆ.
ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಸ್ಪಿ ಸ್ಯಾಮ್ ವರ್ಗಿಸ್, ಆರೋಪಿಗಳಿಂದ ಓಮ್ನಿ ಕಾರ್, ಚೂರಿ, ರಾಡ್ ವಶಕ್ಕೆ ಪಡೆಯಲಾಗಿದೆ ಎಂದರು.
ಆಗಸ್ಟ್ 3ರ ರಾತ್ರಿ, ಬಸ್ ನಿಲ್ದಾಣ ಸಮೀಪದಲ್ಲಿರುವ ಶಿವು ಮೊಬೈಲ್ಸ್ ಎಂಟರ್ಪ್ರೈಸಸ್ನ ಕಟ್ಟಡದ ಹಿಂಬದಿಯ ಕಿಟಿಕಿ ಸರಳುಗಳನ್ನು ಮುರಿದ ಕಳ್ಳರು, ₹6.78 ಲಕ್ಷ ಮೌಲ್ಯದ ಮೊಬೈಲ್, 6 ಮಿಕ್ಸರ್ ಗ್ರೈಂಡರ್, 4 ಹೋಂ ಥಿಯೇಟರ್, ಗೀಸರ್, ಎಲೆಕ್ಟ್ರಿಕ್ ಸ್ಟೌ, ಕುಕ್ವೇರ್ ಸೇರಿದಂತೆ ಗೃಹೂಪಯೋಗಿ ವಸ್ತುಗಳನ್ನು ಕದ್ದೊಯ್ದಿದ್ದರು.
ಅಂಗಡಿ ಮಾಲೀಕ ವೀರೇಶ್ ನೀಡಿದ ದೂರು ಆಧರಿಸಿ, ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ತಾಲ್ಲೂಕಿನ ಮುಕ್ತೇನಹಳ್ಳಿ ಗ್ರಾಮದ ಸುನೀಲ್ ಕುಮಾರ್, ಹರಿಹರ ತಾಲ್ಲೂಕಿನ ನಿಟ್ಟೂರು ಗ್ರಾಮದ ಗಿರೀಶ್, ಬೆಳ್ಳೂಡಿ ಗ್ರಾಮದ ರಾಕೇಶ್ ಹಾಗೂ ಭಾನುವಳ್ಳಿ ಗ್ರಾಮದ ರಾಕೇಶ್ ಎಂಬವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
ಪಿಎಸ್ಐಗಳಾದ ಕುಮಾರ್, ನಿರ್ಮಲಾ, ಎಎಸ್ಐ ಹರೀಶ್, ಸಿಬ್ಬಂದಿ ರಾಮಚಂದ್ರ ಜಾಧವ್, ಹೇಮಾನಾಯ್ಕ, ಚೇತನ್, ಪ್ರವೀಣ್, ರಾಜಶೇಖರ್, ರವಿ, ಬಸವರಾಜು, ಆಹ್ಮದ್ ಖಾನ್, ಮಹೇಂದ್ರ, ಮನೋಹರ್, ಕೃಷ್ಣನಾಯ್ಕ, ಚಾಲಕ ವೆಂಕಟೇಶ್ ಅವರನ್ನು ಪ್ರಶಂಸಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.