ADVERTISEMENT

ರಕ್ಷಣಾ ವೇದಿಕೆ ಹೆಸರಲ್ಲಿ ಸುಲಿಗೆ; ಬಂಧನ

ರಕ್ಷಣಾ ವೇದಿಕೆ ಹೆಸರು ಹೇಳಿಕೊಂಡು ಸುಲಿಗೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 3:59 IST
Last Updated 15 ಆಗಸ್ಟ್ 2022, 3:59 IST

ದಾವಣಗೆರೆ: ರಕ್ಷಣಾ ವೇದಿಕೆ ಹೆಸರು ಹೇಳಿಕೊಂಡು ದಾವಣಗೆರೆಯ ವ್ಯಕ್ತಿಯೊಬ್ಬರಿಗೆ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಇಲ್ಲಿನ ವಿದ್ಯಾನಗರ ಪೊಲೀಸರು ಬಂಧಿತರಿಂದ ₹ 1.20 ಲಕ್ಷ ವಶಪಡಿಸಿಕೊಂಡಿದ್ದಾರೆ.

ಹುಬ್ಬಳ್ಳಿಯ ಶಿವರಾಜ್ ಚಂದ್ರ ಪಟ್ಟಣ (29), ಹಾಸನದ ರಮ್ಯಾ, ತುಮಕೂರಿನ ಪವಿತ್ರಾ (24), ಚಿಕ್ಕಮಗಳೂರಿನ ಸುರೇಶ್‌ ಕುಮಾರ (44) ಬಂಧಿತರು.

ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಯುವತಿಯೊಂದಿಗೆ ದಾವಣಗೆರೆಯ ವ್ಯಕ್ತಿಯು ಯುವತಿಯ ಜೊತೆ ಹೋಂ ಸ್ಟೇನಲ್ಲಿ ಇರುವಾಗ ಈ ಆರೋಪಿಗಳು ‘ನಿಮ್ಮ ಖಾಸಗಿ ಫೋಟೊ ಸೆರೆ ಹಿಡಿದಿದ್ದೇವೆ’ ಎಂದು ಎದುರಿಸಿ ₹ 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ‘ಹಣ ಕೊಡದಿದ್ದರೆ ನಿಮ್ಮ ಮನೆಯವರಿಗೆ ತಿಳಿಸುತ್ತೇನೆ’ ಎಂದು ಹೆದರಿಸಿದ್ದಾರೆ. ಆಗ ದೂರುದಾರರು₹ 1.20 ನೀಡಿದ್ದಾರೆ. ಉಳಿದ ಹಣಕ್ಕೂ ಆರೋಪಿಗಳು ಬೇಡಿಕೆ ಇಟ್ಟಿದ್ದಾರೆ.

ADVERTISEMENT

ಚೀತಾ ಗಸ್ತಿನಲ್ಲಿದ್ದ ಸಿಬ್ಬಂದಿ ನಾಗರಾಜ ಅವರು ಮಾಹಿತಿ ಆಧರಿಸಿ ಸಿಬ್ಬಂದಿಯೊಂದಿಗೆ ಈ ನಾಲ್ವರನ್ನು ಬಂಧಿಸಿದ್ದು, ಅವರಿಂದ ನಗದು, ಒಂದು ಜೆನ್‌ ಕಾರು ಹಾಗೂ 6 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ ನೇತೃತ್ವದಲ್ಲಿ ಕೆ.ಟಿ.ಜೆ. ನಗರ ವೃತ್ತದ ಸಿಪಿಐ ಜಿ.ಶಶಿಧರ್, ಪಿಎಸ್ಐ ರೇಣುಕಾ ಜಿ.ಎಂ. ಕಾಂತರಾಜ್, ಎಎಸ್ಐ ನಾಗರಾಜ್, ಮಂಜಪ್ಪ, ಬುಡೇನ್ ವಲಿ, ಗಿರಿಧರ್, ಬಸವರಾಜ್ ತಂಡದಲ್ಲಿದ್ದರು. ಸಿಬ್ಬಂದಿಯನ್ನು ಎಸ್ಪಿ ಸಿ.ಬಿ.ರಿಷ್ಯಂತ್, ಎಎಸ್‌ಪಿ ಆರ್‌ಬಿ ಬಸರಗಿ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.