ಚನ್ನಗಿರಿ: ಪಟ್ಟಣದ ಹೊರವಲಯದಲ್ಲಿರುವ ಮೌದ್ಗಲ್ ಆಂಜನೇಯಸ್ವಾಮಿ ರಥೋತ್ಸವ ಬುಧವಾರ ವೈಭವದಿಂದ ನಡೆಯಿತು.
ಮಧ್ಯಾಹ್ನ 12ಕ್ಕೆ ಮೌದ್ಗಲ್ ಆಂಜನೇಯಸ್ವಾಮಿ ಉತ್ಸವಮೂರ್ತಿಯನ್ನು ಬೆಟ್ಟದ ಮೇಲಿನ ಆಂಜನೇಯಸ್ವಾಮಿ ದೇವಸ್ಥಾನದಿಂದ ತಂದು ಅಡ್ಡಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಸ್ವಾಮಿಯ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ನೆರೆದಿದ್ದ ಭಕ್ತರು ‘ಗೋವಿಂದ, ಗೋವಿಂದ’ ಎಂಬ ಜಯಘೋಷ ಕೂಗುತ್ತಾ ರಥವನ್ನು ಎಳೆದರು.
ರಥ ಮುಂದೆ ಮುಂದೆ ಸಾಗುತ್ತಿದ್ದಂತೆ ಭಕ್ತರು ರಥದ ಮೇಲೆ ಬಾಳೆಹಣ್ಣುಗಳನ್ನು ಎಸೆಯುವ ಮೂಲಕ ಹರಕೆ ಸಮರ್ಪಿಸಿದರು. ರಥೋತ್ಸವಕ್ಕೂ ಮುನ್ನ 50ಕ್ಕಿಂತ ಹೆಚ್ಚು ಎತ್ತಿನಗಾಡಿಗಳು ರಥದ ಸುತ್ತ ಒಂದು ಸುತ್ತು ಸುತ್ತಿ, ನಂತರ ರಭಸದಿಂದ ಮುಂದಕ್ಕೆ ಸಾಗುವ ದೃಶ್ಯ ನೋಡಲು ರೋಮಾಂಚನಕಾರಿಯಾಗಿತ್ತು.
20ಕ್ಕಿಂತ ಹೆಚ್ಚು ಟ್ರ್ಯಾಕ್ಟರ್ ಹಾಗೂ ಆಟೊಗಳು ರಥದ ಸುತ್ತ ಸುತ್ತಿದವು. ರಥೋತ್ಸವ ಮುಗಿದ ನಂತರ ಅನೇಕ ಎತ್ತಿನಗಾಡಿಗಳಲ್ಲಿ ತಂದ ಪಾನಕ ಹಾಗೂ ಕೋಸುಂಬರಿಯನ್ನು ನೆರೆದಿದ್ದ ಭಕ್ತರಿಗೆ ಹಂಚಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.