ದಾವಣಗೆರೆ: ಜಿಲ್ಲೆಯಲ್ಲಿ ಮುಂಗಾರು ಸಮರ್ಪಕವಾಗಿ ಸುರಿಯದ ಕಾರಣ ಬರಗಾಲ ಆವರಿಸಿರುವುದು ಒಂದೆಡೆಯಾದರೆ, ಅಂತರ್ಜಲ ಮಟ್ಟವೂ ಕುಸಿಯುತ್ತಿರುವ ಸಂಕಷ್ಟ ಇನ್ನೊಂದೆಡೆ ಎದುರಾಗಿದೆ. ಇದು ಬೇಸಿಗೆಯ ದಿನಗಳ ನಿರ್ವಹಣೆಯ ಕುರಿತು ಆತಂಕ ಸೃಷ್ಟಿಸಿದೆ.
ಸಮರ್ಪಕ ಮಳೆ ಸುರಿಯದಿರುವುದು, ಪಂಪ್ಸೆಟ್ಗಳು, ಮೋಟರ್ಗಳು ಚಾಲನೆಯಲ್ಲಿರುವುದು ಕಾರಣ. ಉತ್ತಮ ಮಳೆ ಸುರಿದಲ್ಲಿ ಸಾಮಾನ್ಯವಾಗಿ ಮೋಟರ್ಗಳು ಕಾರ್ಯಾಚರಣೆ ಮಾಡು
ವುದಿಲ್ಲ. ಆದರೆ, ಈ ವರ್ಷ ಅಗತ್ಯದಷ್ಟು ಮಳೆ ಸುರಿಯದೇ ಇರುವುದು ಹಾಗೂ ಮೋಟರ್ಗಳು ನಿರಂತರವಾಗಿ ಕಾರ್ಯಾಚರಣೆ ಮಾಡುತ್ತಿರುವುದು ಅಂತರ್ಜಲ ಮಟ್ಟದ ಕುಸಿತಕ್ಕೆ ಕಾರಣವಾಗಿದೆ.
ಮಳೆಗಾಲದಲ್ಲಿಯೇ ಬೇಸಿಗೆ ವಾತಾವರಣ ನಿರ್ಮಣ ಆಗಿರುವುದರಿಂದ ಜಲಮೂಲಗಳು ಒಣಗುತ್ತಿದ್ದು, ಕೊಳವೆಬಾವಿ ನೀರಿನ ಬಳಕೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟದ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸೆಪ್ಟೆಂಬರ್ ವೇಳೆಗೆ ಸರಾಸರಿ 5.10 ಮೀಟರ್ ಕೆಳಗೆ ಕುಸಿದಿದೆ. ಕಳೆದ ವರ್ಷ ಸರಾಸರಿ ಅಂತರ್ಜಲ ಮಟ್ಟ 3.80 ಮೀಟರ್ ಇದ್ದಿದ್ದು, ಈ ವರ್ಷ 8.90 ಮೀಟರ್ನಷ್ಟು ಕುಸಿತ ಕಂಡಿದೆ.
ಜಗಳೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ, 18.21 ಮೀಟರ್ಗಳಷ್ಟು ಕುಸಿದಿದ್ದರೆ, ಹೊನ್ನಾಳಿಯಲ್ಲಿ ಅತ್ಯಂತ ಕಡಿಮೆ 3.40 ಮೀಟರ್ಗಳಷ್ಟು ಕುಸಿದಿದೆ. ಉಳಿದಂತೆ ಹರಿಹರದಲ್ಲಿ 4.59, ದಾವಣಗೆರೆಯಲ್ಲಿ 8.68, ಚನ್ನಗಿರಿಯಲ್ಲಿ 6.89, ನ್ಯಾಮತಿಯಲ್ಲಿ 11.63 ಮೀಟರ್ಗಳಷ್ಟು ಆಳಕ್ಕಿಳಿದಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ದಾವಣಗೆರೆಯಲ್ಲಿ 3.31 ಮೀಟರ್, ಹರಿಹರದಲ್ಲಿ 1.95 ಮೀಟರ್, ಚನ್ನಗಿರಿಯಲ್ಲಿ 2.51, ಹೊನ್ನಾಳಿಯಲ್ಲಿ 2.00, ನ್ಯಾಮತಿಯಲ್ಲಿ 2.45 ಹಾಗೂ ಜಗಳೂರಿನಲ್ಲಿ 10.55ರಷ್ಟು ಅಂತರ್ಜಲ ಮಟ್ಟ ಇತ್ತು.
ದಾವಣಗೆರೆ ತಾಲ್ಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 5.37 ಮೀಟರ್, ಹರಹರದಲ್ಲಿ 2.64, ಚನ್ನಗಿರಿಯಲ್ಲಿ 4.38, ಹೊನ್ನಾಳಿಯಲ್ಲಿ 1.40, ನ್ಯಾಮತಿಯಲ್ಲಿ 9.18, ಜಗಳೂರು ತಾಲ್ಲೂಕಿನಲ್ಲಿ 7.66 ಮೀಟರ್ನಷ್ಟು ಕುಸಿತ ಕಂಡಿದೆ.
‘ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಲೇ ಇದೆ. ಈ ಬಾರಿ ಮಳೆ ಸಮರ್ಪಕವಾಗಿ ಬಾರದೇ ಇರುವುದರಿಂದ ಕೊಳವೆಬಾವಿ ನೀರು ಹೆಚ್ಚು ಬಳಕೆಯಾಗುತ್ತಿದೆ. ರೈತರು ತಮ್ಮ
ಜಮೀನಿನಲ್ಲಿ ಬದು, ಕೃಷಿ ಹೊಂಡಗಳ ನಿರ್ಮಾಣ, ಕೊಳವೆಬಾವಿ ಮರುಪೂರಣ ವ್ಯವಸ್ಥೆ ಮಾಡಿಕೊಂಡಾಗ ನೀರು ಜಮೀನಿನಲ್ಲಿ ನಿಲ್ಲುವುದರಿಂದ ಅಂತರ್ಜಲ ಮಟ್ಟ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯ’ ಎಂದು ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿ ಬಸವರಾಜ್ ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.