ADVERTISEMENT

ಭದ್ರಾ ಅಚ್ಚುಕಟ್ಟು: ಭರದಿಂದ ಸಾಗಿದ ಭತ್ತ ನಾಟಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2023, 5:50 IST
Last Updated 20 ಆಗಸ್ಟ್ 2023, 5:50 IST
ಬಸವಾಪಟ್ಟಣ ವ್ಯಾಪ್ತಿಯ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಭತ್ತದ ನಾಟಿಯಲ್ಲಿ ತೊಡಗಿರುವುದು
ಬಸವಾಪಟ್ಟಣ ವ್ಯಾಪ್ತಿಯ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಭತ್ತದ ನಾಟಿಯಲ್ಲಿ ತೊಡಗಿರುವುದು   

ಬಸವಾಪಟ್ಟಣ: ಕಳೆದೊಂದು ವಾರದಿಂದ ಭದ್ರಾ ಜಲಾಶಯದ ಅಚ್ಚುಕಟ್ಟು ಭಾಗದ ನಾಲೆಗಳಲ್ಲಿ ನೀರು ಹರಿಸಲಾಗುತ್ತಿದ್ದು, ಭತ್ತದ ನಾಟಿ ಕಾರ್ಯ ಭರದಿಂದ ಸಾಗಿದೆ.  

ನಾಲೆಗೆ ನೀರು ಬರುವ ಮೊದಲೇ ಕೆಲವರು ಕೊಳವೆಬಾವಿ ನೀರಿನಿಂದ ಸಸಿ ಮಾಡಿಕೊಂಡಿದ್ದರು. ಇನ್ನೂ ಕೆಲವರು ಇತರ ರೈತರ ಗದ್ದೆಗಳಲ್ಲಿ ಸಸಿ ಬೆಳೆಸಿಕೊಂಡಿದ್ದರು. ಇವರೆಲ್ಲಾ ಈಗ ನಾಟಿ ಆರಂಭಿಸಿದ್ದಾರೆ. ಆದರೆ ನಾಲೆಗಳಲ್ಲಿ ನೀರು ಬಂದ ಮೇಲೆ ಬೀಜ ಚೆಲ್ಲಿರುವ ರೈತರಿಗೆ, ಮುಂದೆ ನಾಲೆಗಳಲ್ಲಿ ನೀರು ಸ್ಥಗಿತಗೊಂಡರೆ ಏನು ಮಾಡುವುದು ಎಂಬ ಭೀತಿ ಕಾಡುತ್ತಿದೆ.

ಬಸವಾಪಟ್ಟಣ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ 3,300 ಹೆಕ್ಟೇರ್‌ ಪ್ರದೇಶದಲ್ಲಿ ಪ್ರತಿ ವರ್ಷ ಎರಡು ಹಂಗಾಮಿನಲ್ಲಿಯೂ ಭತ್ತ ಬೆಳೆಯಲಾಗುತ್ತಿದೆ. ನೀರಾವರಿ ಇಲಾಖೆ 100 ದಿನಗಳವರೆಗೆ ಭದ್ರಾ ಜಲಾಶಯದಿಂದ ನೀರು ಹರಿಸುವ ಭರವಸೆ ನೀಡಿದೆ ಎಂದು ಕಣಿವೆಬಿಳಚಿಯ ರೈತ ಎಸ್‌.ಅಣ್ಣೋಜಿರಾವ್‌ ಹೇಳಿದರು.

ADVERTISEMENT

15 ದಿನಗಳಿಂದ ಮಳೆಯ ಸುಳಿವಿಲ್ಲ. ಮಳೆ ಹೀಗೆಯೇ ಕಣ್ಣಾಮುಚ್ಚಾಲೆ ಆಡಿದರೆ ಭತ್ತದ ನಾಟಿ ಮಾಡಿಕೊಂಡಿರುವ ನಮಗೆ ನೀರಿನ ಕೊರತೆ ಆಗಬಹುದೇನೋ ಎನ್ನುತ್ತಾರೆ ಹರೋಸಾಗರದ ರೈತ ನಾಗರಾಜಪ್ಪ. ಗದ್ದೆಗಳಲ್ಲಿ ಕೊಳವೆಬಾವಿ ಇರುವವರು ನೀರು ಹಾಯಿಸಿ ಬೆಳೆ ರಕ್ಷಿಸಿಕೊಳ್ಳುತ್ತಾರೆ. ಆದರೆ ಭದ್ರಾ ನಾಲೆಯನ್ನೇ ಅವಲಂಬಿಸಿರುವ ರೈತರಿಗೆ ಆತಂಕ ಕಾಡುತ್ತಿದೆ ಎನ್ನುತ್ತಾರೆ ಕಂಸಾಗರದ ರೈತ ವೀರಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.