ದಾವಣಗೆರೆ: ಮಗಳು ಕೊರೊನಾದಿಂದ, ತಂದೆ ಹೃದಯಾಘಾತದಿಂದ ಒಂದೇ ರಾತ್ರಿಯಲ್ಲಿ ಮೃತಪಟ್ಟಿದ್ದಾರೆ.
ನಗರದ ಶಿವಕುಮಾರಸ್ವಾಮಿ ಬಡಾವಣೆ ನಿವಾಸಿ, 30 ವರ್ಷಗಳಿಂದ ಖಾಸಗಿ ಬಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಅಲಿಯಾಸ್ ಸೀಸ್ಕಡ್ಡಿ (55) ಮತ್ತು ಅವರ ಮಗಳು ಪೂಜಾ ಕೆ. (27) ಮೃತಪಟ್ಟವರು.
ಪೂಜಾ ಅವರನ್ನು ಇಲ್ಲಿನ ಜಯನಗರದ ಮಂಜುನಾಥ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಮಂಜುನಾಥ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಎಲೆಕ್ಟ್ರೀಶಿಯನ್ ಆಗಿದ್ದರು. ಪೂಜಾ ಕೂಡ ಬೆಂಗಳೂರಿನಲ್ಲೇ ಇದ್ದರು. ಅಲ್ಲಿ ಕೊರೊನಾ ಸೋಂಕು ತಗುಲಿದ್ದರಿಂದ ಪೂಜಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ರಾತ್ರಿ 11ಕ್ಕೆ ಮೃತಪಟ್ಟಿದ್ದರು.
ಈ ವಿಚಾರವನ್ನು ತಂದೆಗೆ ತಿಳಿಸಿರಲಿಲ್ಲ. ಆದರೆ, ಬೆಳಗಾಗುವ ಮೊದಲೇ ಮಂಜುನಾಥ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
‘ಅಕ್ಕ ಮೃತಪಟ್ಟಿರುವುದು ಅಪ್ಪನಿಗೆ ಗೊತ್ತಿಲ್ಲ. ಅಪ್ಪ ನಿಧನರಾಗಿರುವುದು ಅಕ್ಕನಿಗೆ ಗೊತ್ತಿಲ್ಲ’ ಎಂದು ಪೂಜಾ ಅವರ ಸಹೋದರ ಸಾಗರ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.