ಹರಪನಹಳ್ಳಿ: ‘ಪಂಚಮಸಾಲಿ ಸಮಾಜ 26 ವರ್ಷಗಳಿಂದ 2 ‘ಎ’ ಮೀಸಲಾತಿಗಾಗಿ ಅಕ್ಕಮಹಾದೇವಿಯಂತೆ ಶಾಂತಿ, ಸಹನೆಯಿಂದ ಹೋರಾಟ ಮಾಡುತ್ತಿರುವ ಜನಾಂಗ. ನಮ್ಮ ತಾಳ್ಮೆಯ ಕಟ್ಟೆ ಒಡೆದಿದ್ದು, ಇನ್ನು ಮುಂದೆ ಕಿತ್ತೂರು ರಾಣಿ ಚನ್ನಮ್ಮನಂತೆ ಉಗ್ರ ಹೋರಾಟದ ಮೂಲಕ ನಮ್ಮ ಹಕ್ಕು ಪಡೆಯುತ್ತೇವೆ’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಸೋಮವಾರ ಹರಪನಹಳ್ಳಿ ತಾಲ್ಲೂಕು ಪ್ರವೇಶಿಸಿದ ಪಾದಯಾತ್ರೆಯನ್ನು ತಾಲ್ಲೂಕು ಪಂಚಮಸಾಲಿ ಹೋರಾಟ ಸಮಿತಿಯಿಂದ ಸ್ವಾಗತಿಸಲಾಯಿತು. ಬಳಿಕ ನಂದಿಬೇವೂರು ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ರಾಜ್ಯದ ಹಾಲಮತ ಸಮಾಜ ಎಸ್ಟಿಗೆ ಸೇರಿಸಲು ಹೋರಾಟ ಮಾಡುತ್ತಿವೆ. ವಾಲ್ಮೀಕಿ ನಾಯಕ ಜನಾಂಗ ಮೀಸಲಾತಿ ಹೆಚ್ಚಿಸಲು ಹೋರಾಟ ಮಾಡುತ್ತಿವೆ. ಪಂಚಮಸಾಲಿ ಜನಾಂಗ 2 ‘ಎ’ ಮೀಸಲಾತಿ ಕೇಳುತ್ತಿದೆ. ಮುಖ್ಯಮಂತ್ರಿ ಕಚೇರಿ, ಮನೆಗೆ ತೆರಳಿ ಮನವಿ ಸಹನೆ, ತಾಳ್ಮೆಯಿಂದ ಮನವಿ ಸಲ್ಲಿಸಲಾಗಿದೆ. ಇನ್ನೇನಿದ್ದರೂ ಉಗ್ರವಾಗಿ ಪ್ರತಿಭಟಿಸಬೇಕಾಗುತ್ತದೆ ಎಂದು ಹೇಳಿದರು.
‘ಇತಿಹಾಸದಲ್ಲಿ ಕಿತ್ತೂರು ರಾಣಿ ಚನ್ನಮ್ಮನಿಂದ ಹಿಡಿದು ಮಹಾಂತ್ಮ ಗಾಂಧೀಜಿವರೆಗೆ ಹಕ್ಕು ಪಡೆಯಲು ಹೋರಾಟ ನಡೆದಿದೆ. ಪಂಚಮಸಾಲಿ ಜನಾಂಗ ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡುತ್ತಿಲ್ಲ. ನಮ್ಮ ಪಾಲಿನ ನ್ಯಾಯ ಸಮ್ಮತವಾದ ಹಕ್ಕು ಪಡೆಯಲು ಹೋರಾಟ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಅವಧಿಯಲ್ಲಿಯೇ ಜನಾಂಗಕ್ಕೆ ಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು.
ಹಿರೇಹಡಗಲಿ ಮಠದ ಸಣ್ಣ ಹಾಲಸ್ವಾಮೀಜಿ ಕಣಿವಿಹಳ್ಳಿಯಲ್ಲಿ ಪಾದಯಾತ್ರೆಗೆ ಸಾಥ್ ನೀಡಿದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ವಿಜಯಾನಂದ ಕಾಶಪ್ಪನವರ್, ನಂದಿಹಳ್ಳಿ ಹಾಲಪ್ಪ, ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ಪೂಜಾರ ಚಂದ್ರಶೇಖರ್, ಎನ್.ಕೊಟ್ರೇಶ್, ಶಶಿಧರ ಪೂಜಾರ್, ಪಾಟೀಲ್ ಬೆಟ್ಟನಗೌಡ್ರು, ಕೋಡಿಹಳ್ಳಿ ಭೀಮಪ್ಪ, ಎಂ.ಪಿ.ವೀಣಾ, ಕುಂಚೂರು ಈರಣ್ಣ, ಪರಮೇಶ್ವರಪ್ಪ, ಪೂಜಾರ ಬಸವರಾಜ್, ಪಿ.ಕರಿಬಸಪ್ಪ, ಅಕ್ಕಂಡಿ ಸಿದ್ದೇಶ, ಬೋರ್ವೆಲ್ ಲಿಂಗರಾಜ್, ಮಹೇಶ್ ಪೂಜಾರ್, ಓಂಕಾರಗೌಡ, ಕುಂಚೂರು ಕೊಟ್ರೇಶ್, ಪಿ.ಬಿ.ಗೌಡ ಸೇರಿದಂತೆ ಸಮಾಜದ ಮುಖಂಡರು ಇದ್ದರು.
ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದಿಂದ ಪಾದಯಾತ್ರೆ ಆರಂಭಿಸಿದ ಸ್ವಾಮೀಜಿಯನ್ನು ಹರಪನಹಳ್ಳಿ ತಾಲ್ಲೂಕು ಪಂಚಮಸಾಲಿ ಜನಾಂಗದ ಮುಖಂಡರು ನಂದಿಬೇವೂರು ಗ್ರಾಮದಲ್ಲಿ ಕಳಸದ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು. ಬಹಿರಂಗ ಸಭೆ ಬಳಿಕ ಕಣಿವಿಹಳ್ಳಿ ಗ್ರಾಮದಲ್ಲಿ ಊಟ ಮುಗಿಸಿಕೊಂಡು, ಹರಪನಹಳ್ಳಿಗೆ ಪ್ರವೇಶ ಮಾಡಿದರು. ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
12 ದಿನಗಳಲ್ಲಿಪಾದಯಾತ್ರೆ 270 ಕಿ.ಮೀ. ಕ್ರಮಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.