ದಾವಣಗೆರೆ: ಇಲ್ಲಿನ 31ನೇ ವಾರ್ಡ್ ಆವರೆಗೆರೆ ಸೇರಿದ ಪಿ.ಬಸವನಗೌಡ ಬಡಾವಣೆಯಲ್ಲಿ 9 ಭತ್ತದ ಹುಲ್ಲಿನ ಬಣವೆಗೆ ಬೆಂಕಿ ಬಿದ್ದಿದ್ದು, ಸುಟ್ಟು ಭಸ್ಮವಾಗಿವೆ. ₹4.50 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಶನಿವಾರ ಮಧ್ಯರಾತ್ರಿ ಬೆಂಕಿ ಬಿದ್ದಿದ್ದು, ಕಿಡಿಗೇಡಿಗಳ ಕೈವಾಡವಿದೆ ಎಂದು ಅಲ್ಲಿನ ನಿವಾಸಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಬಡಾವಣೆಯ ಮುಖ್ಯರಸ್ತೆ ಹಳೆ ಶಾಲೆ ಆವರಣದ ಮುಂಭಾಗದಲ್ಲಿ ಇದ್ದ 14 ಬಣವೆಗಳಲ್ಲಿ 9 ಬಣವೆಗಳು ಸಂಪೂರ್ಣ ಭಸ್ಮವಾಗಿವೆ.
6 ಅಗ್ನಿಶಾಮಕ ವಾಹನಗಳಲ್ಲಿ 30ಕ್ಕೂ ಹೆಚ್ಚು ಸಿಬ್ಬಂದಿ ರಾತ್ರಿ 1ಗಂಟೆಯಿಂದ ನಿರಂತರ 8 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಜಯರಾಮ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು.
ಒಂದು ಬಣವೆಗೆ ಸುಮಾರು ₹ 60 ಸಾವಿರದಿಂದ ₹70 ಸಾವಿರ ಬೆಲೆ ಬಾಳಲಿದ್ದು, ಪಶುಗಳಿಗೆ ಹುಲ್ಲು ಇಲ್ಲದ ಕಷ್ಟಕರ ಪರಿಸ್ಥಿತಿಯಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕು. ಜಿಲ್ಲಾಡಳಿತ ಪರಿಹಾರ ನೀಡಬೇಕು ಎಂದು ಬಣವೆಗಳ ಮಾಲೀಕರಾದ ಗುರುಸಿದ್ದಪ್ಪ, ಕುಬೇರಪ್ಪ, ಭಾಗ್ಯಮ್ಮ, ತಿಪ್ಪೇಸ್ವಾಮಿ ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.