ADVERTISEMENT

ಕೇಂದ್ರ ಸರ್ಕಾರ ಜಾತಿ ಗಣತಿ ಮಾಡಲು ಹೊರಟಿರುವುದು ಯಾವ ಸ್ವಾರ್ಥಕ್ಕೆ?: ರಾಜಣ್ಣ

​ಪ್ರಜಾವಾಣಿ ವಾರ್ತೆ
Published 1 ಮೇ 2025, 11:40 IST
Last Updated 1 ಮೇ 2025, 11:40 IST
<div class="paragraphs"><p>ಕೆ.ಎನ್. ರಾಜಣ್ಣ</p></div>

ಕೆ.ಎನ್. ರಾಜಣ್ಣ

   

ದಾವಣಗೆರೆ: ‘ರಾಜ್ಯದ ಕಾಂಗ್ರೆಸ್‌ ಸರ್ಕಾರ ಆರ್ಥಿಕ, ಸಾಮಾಜಿಕ ಸಮೀಕ್ಷೆ ಮಾಡಿದಾಗ ಸ್ವಾರ್ಥಕ್ಕಾಗಿ, ಓಲೈಕೆಗಾಗಿ ಮಾಡಿದ್ದಾರೆ ಎಂದು ಬಿಜೆಪಿಯವರು ಹೇಳಿಕೆ ನೀಡಿದ್ದರು. ಈಗ ಕೇಂದ್ರದವರು ಜಾತಿ ಗಣತಿ ಮಾಡಲು ಹೊರಟಿದ್ದಾರಲ್ಲ, ಯಾವ ಸ್ವಾರ್ಥಕ್ಕಾಗಿ’ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಪ್ರಶ್ನಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಜಾತಿ ಗಣತಿಗೆ ನಿರ್ಧಾರ ಮಾಡಿರುವುದು ಸ್ವಾಗತಾರ್ಹ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಬಹಳ ಹಿಂದೆ ಇದೆ. ಸಿದ್ದರಾಮಯ್ಯ ಈಗಾಗಲೇ ಅದನ್ನು ಮಾಡಿ ಮುಗಿಸಿದ್ದಾರೆ’ ಎಂದರು.

ADVERTISEMENT

‘ಆರ್ಥಿಕ, ಸಾಮಾಜಿಕ ಸಮೀಕ್ಷಾ (ಜಾತಿ ಗಣತಿ) ವರದಿಯನ್ನು ಸಚಿವ ಸಂಪುಟದ ಮುಂದೆ ಇಟ್ಟಾಗ ಯಾರೂ ವಿರೋಧ ಮಾಡಿಲ್ಲ. ವರದಿಗೆ ವಿರುದ್ಧವಾದ ಅಭಿಪ್ರಾಯ ನೀಡಿಲ್ಲ. ಯಾರಿಗೂ ಅನ್ಯಾಯವಾಗದಂತೆ ನೋಡಬೇಕು ಎಂದು ಹೇಳಿದ್ದರು. ಇದಕ್ಕೆ ವಿರೋಧ‍ ಪಕ್ಷದವರು ವರದಿ ಬಿಡುಗಡೆಗೆ ಸರ್ಕಾರ ಸಿದ್ಧವಿಲ್ಲ ಎಂದು ಆರೋಪ ಮಾಡಿದರು. ವರದಿ ಕಳೆದು ಹೋಗಿದೆ ಎಂದರೆ ಬಿಜೆಪಿಯವರಿಗೆ ಹೋಗಿ ಹುಡುಕಿಕೊಂಡು ಬರೋದಕ್ಕೆ ಹೇಳಿ. ಕಳೆದು ಹೋಗಿದೆ ಎಂದು ಸುಳ್ಳು ಹೇಳಿ ತಪ್ಪು ಸಂದೇಶ ನೀಡುವ ಕೆಲಸ ನಡೆಯುತ್ತಿದೆ’ ಎಂದು ದೂರಿದರು.

‘ಜಾತಿಗಣತಿಯ 8 ಸಂಪುಟಗಳನ್ನು ಎಲ್ಲ ಸಚಿವರಿಗೆ ನೀಡಲಾಗಿದೆ. ಯಾವ ವರದಿಯೂ‌ ಕಳೆದು ಹೋಗಿಲ್ಲ, ಎಲ್ಲವೂ ಇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿಎಂ ವಿರುದ್ಧ ಹೇಳಿಕೆ ನೀಡಿದವರಿಗೆ ಸ್ಥಿಮಿತತೆ ಸರಿಯಿಲ್ಲ:

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದವರ ಸ್ಥಿಮಿತತೆಯೇ ಸರಿ ಇಲ್ಲ. ಕಾಂಗ್ರೆಸ್ ಶಾಲು ಹಾಕಿಕೊಂಡು ನಮ್ಮ ಕಾರ್ಯಕ್ರಮದಲ್ಲಿ ಕುಳಿತುಕೊಂಡು ಧಿಕ್ಕಾರ ಕೂಗಿದರೆ ಅವರನ್ನು ಏನನ್ನಬೇಕು. ಪೊಲೀಸ್ ಅಧಿಕಾರಿ ಮೇಲೆ ಸಿದ್ದರಾಮಯ್ಯ ಅವರು ಕೈ ಎತ್ತಿಲ್ಲ. ಏಕವಚನದಲ್ಲಿ ಅವರು ಯಾರನ್ನು ಕರೆದಿಲ್ಲ. ಪ್ರೀತಿಯಿಂದ ಕರೆದು ಕೈ ಎತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, ‘ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎನ್ನುವುದು ದೇಶದ ಜನರ ಭಾವನೆ. ನಾನು ಕೂಡ ದೇಶದ ಪ್ರಜೆಗಳಲ್ಲಿ ಒಬ್ಬ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.