ದಾವಣಗೆರೆ: ಸಂತೋಷ ಪಡುವ ಕಾಲದಲ್ಲಿ ನಾವು ಬದುಕುತ್ತಿಲ್ಲ. ಅಸಂಹಿಷ್ಣುತೆ, ಭಯದ ಜೊತೆಗೆ ಉಸಿರು ಕಟ್ಟುವ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಸನಾತನ ಸಂಸ್ಕೃತಿಯ ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಹತ್ತಿಕ್ಕುವ ಕೆಲಸವಾಗುತ್ತಿದೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಅನ್ವೇಷಣೆ ಸಂಪಾದಕ ಆರ್.ಜಿ.ಹಳ್ಳಿ ನಾಗರಾಜ್ ಹೇಳಿದರು.
ನಗರದ ಬಿಐಇಟಿ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣನಲ್ಲಿ ಭಾನುವಾರ ನಡೆದ ಕು.ಸ.ಮಧುಸೂದನ ರಂಗೇನಹಳ್ಳಿ ಕವಿತೆಗಳ ದುರಿತಕಾಲದ ದನಿ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಕಾಲಿನ ವಿಚಾರ ಇಟ್ಟುಕೊಂಡೇ ಈ ಕೃತಿಯ ಕವಿತೆಗಳು ರಚನೆಯಾಗಿವೆ. ಟೀಕೆ, ಟಿಪ್ಪಣ್ಣಿ ಜೊತೆಗೆ ತೆಜೋವಧೆಗಳೇ ಅಧಿಕಗೊಂಡಿರುವ ಕಾಲದಲ್ಲಿ ದುಗುಡ, ದುಮ್ಮಾನಗಳ ನಡುವೆ ಸಾಹಿತ್ಯ ಸೃಷ್ಟಿಯಾಗುತ್ತಿದೆ. ದುರಿತಕಾಲದ ದನಿ ಎಂದರೆ ಕೆಟ್ಟ ಕಾಲದ ದನಿ ಎಂದರ್ಥ ಎಂದು ವಿವರಿಸಿದರು.
ಸಾಹಿತಿ ಡಾ.ಪ್ರಕಾಶ್ ಹಲಗೇರಿ ಮಾತನಾಡಿ, ‘ಈಗಿನ ದುರಿತಕಾಲದ ವಿರುದ್ಧ ಕವಿತೆಗಳ ಮೂಲಕ ಕವಿ ದನಿ ಎತ್ತಿದ್ದಾರೆ. ಆರೋಗ್ಯ ಪೂರ್ಣ ದನಿಯಾಗಿದೆ. ಕಾವ್ಯದ ಕಟ್ಟುಪಾಡುಗಳನ್ನು ಕಿತ್ತು ಎಸೆದು, ರೀತಿ, ನೀತಿಗಳನ್ನು ದಾಟಿ ಅವರದ್ದೇ ಶೈಲಿಯಲ್ಲಿ ಬರೆದಿದ್ದಾರೆ’ ಎಂದರು.
ಕಾರ್ಯಕ್ರಮದಲ್ಲಿ ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ, ಕವಿ ಕು.ಸ.ಮಧುಸೂದನ ರಂಗೇನಹಳ್ಳಿ, ಡಾ.ಎಚ್.ಬಿ.ಅರವಿಂದ, ಡಾ.ಎಚ್.ಎಲ್.ಪುಷ್ಪಾ, ಐ.ಎಸ್.ಗೀತಾ, ಸಾಹಿತಿ ಸಂತೇಬೆನ್ನೂರು ಪೈಜ್ನಟ್ರಾಜ್, ಕೆ.ಎಸ್.ವೀರಭದ್ರಪ್ಪ ತೆಲಿಗಿ, ಡಾ.ಎಂ.ಇ. ಶಿವಕುಮಾರ ಹೊನ್ನಾಳಿ, ನಾದೇವ ಕಾಗದಗಾರ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.