ದಾವಣಗೆರೆ: ‘ಉದ್ಯಮ, ಶಿಕ್ಷಣ ಸಂಸ್ಥೆಗಳನ್ನು ಸ್ವಸಾಮರ್ಥ್ಯದಿಂದ ಕಟ್ಟಿ ಬೆಳೆಸಿದ್ದೇನೆ. ಬಿ.ಎಸ್. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಬಳಿಕ ಯಾವುದಾದರು ಪ್ರಯೋಜನ ಪಡೆದಿರುವುದನ್ನು ಸಾಭೀತುಪಡಿಸಿದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ’ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಸವಾಲು ಹಾಕಿದರು.
ಇಲ್ಲಿನ ಅಭಿನವ ರೇಣುಕ ಮಂದಿರದಲ್ಲಿ ಜಿ.ಎಂ. ಸಿದ್ದೇಶ್ವರ ಅಭಿಮಾನಿ ಬಳಗವು 74ನೇ ಜನ್ಮದಿನದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ‘ನಮ್ಮಭಿಮಾನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಶಿಕ್ಷಣ ಸಂಸ್ಥೆಗೆ ಅನುಮತಿ ಸಿಕ್ಕು 25 ವರ್ಷ ಕಳೆದಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕಾನೂನು ಬದ್ಧವಾಗಿ ಭೂಮಿ ಪಡೆಯಲಾಗಿದೆ. ಕೋಟ್ಯಂತರ ರೂಪಾಯಿ ಆಸ್ತಿ ಗಳಿಸಲು ಸಹೋದರರು, ಮಕ್ಕಳೊಂದಿಗೆ ಕಷ್ಟಪಟ್ಟು ದುಡಿದಿದ್ದೇನೆ. ಸಕ್ಕರೆ ಕಾರ್ಖಾನೆಯನ್ನು ಹರಾಜಿನಲ್ಲಿ ತೆಗೆದುಕೊಂದ್ದೇವೆ’ ಎಂದು ರಾಜಕೀಯ ವಿರೋಧಿಗಳ ಆರೋಪಗಳಿಗೆ ಪ್ರತಿಕ್ರಿಯಿಸಿದರು.
‘2006ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಉಪಮುಖ್ಯಮಂತ್ರಿ ಮಾಡಲು ಜೆಡಿಎಸ್ನ ಎಚ್.ಡಿ.ಕುಮಾರಸ್ವಾಮಿ ಅವರನ್ನು ಒಪ್ಪಿಸಿದ್ದು ನಾನೇ. 2008ರಲ್ಲಿ ಅವರನ್ನು ಮುಖ್ಯಮಂತ್ರಿ ಮಾಡಲು ಪಕ್ಷೇತರರ ಬೆಂಬಲ ಪಡೆಯುವ ಹೊಣೆಗಾರಿಕೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ವೆಂಕಯ್ಯ ನಾಯ್ಡು ನನಗೆ ನೀಡಿದ್ದರು’ ಎಂದು ಹೇಳಿದರು.
‘ಬಿಜೆಪಿ ನಾಯಕರಾಗಿದ್ದ ಅನಂತಕುಮಾರ್ ಜೊತೆಗಿನ ಯಡಿಯೂರಪ್ಪ ಅವರ ಮುನಿಸು ಸರಿಪಡಿಸುವ ಕೆಲಸವನ್ನು ಸಿದ್ದೇಶ್ವರ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪಕ್ಷದ ಕಚೇರಿಗೆ ಮೊದಲ ಬಾರಿಗೆ ಸ್ಥಳಾವಕಾಶ ಕಲ್ಪಿಸಿದ ಕುಟುಂಬವಿದು. ಇಂತಹ ಕುಟುಂಬಕ್ಕೆ ಆಗಿರುವ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಪಕ್ಷ ಮತ್ತು ಅವರ ಕುಟುಂಬಕ್ಕೆ ದಯವಿಟ್ಟು ತೊಂದರೆ ನೀಡಬೇಡಿ’ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಮನವಿ ಮಾಡಿದರು.
ಶಾಸಕ ಬಿ.ಪಿ.ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎನ್.ಲಿಂಗಣ್ಣ, ಎಚ್.ಪಿ. ರಾಜೇಶ್, ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ, ಪುತ್ರ ಜಿ.ಎಸ್.ಅನಿತ್, ಬಿಜೆಪಿ ಮುಖಂಡರಾದ ಯಶವಂತರಾವ್ ಜಾಧವ್, ಶಿವಕುಮಾರ್, ವೀರೇಶ್ ಹನಗವಾಡಿ, ರಾಜನಹಳ್ಳಿ ಶಿವಕುಮಾರ್, ಶಾಂತರಾಜ ಪಾಟೀಲ, ದೇವರಮನಿ ಶಿವಕುಮಾರ್, ಮುರುಗೇಶ್ ಆರಾಧ್ಯ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಚಿದಾನಂದಪ್ಪ, ಸ್ವಾಭಿಮಾನಿ ಬಳಗದ ಜಿ.ಬಿ.ವಿನಯ್ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.