ಹರಿಹರ: ನಗರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ವಿನಾಯಕ ಸಂಘ ಆಯೋಜಿಸಿರುವ 62ನೇ ವರ್ಷದ ಗಣಶೋತ್ಸವದಲ್ಲಿ ನಿತ್ಯ ಪ್ರದರ್ಶನ ಮಾಡುತ್ತಿರುವ ಹರಿಹರೇಶ್ವರ ಸ್ವಾಮಿ ಪೌರಾಣಿಕ ಹಿನ್ನೆಲೆ ಆಧರಿಸಿದ ರೂಪಕ ಪ್ರದರ್ಶನ ಜನಮನ ಸೆಳೆಯುತ್ತಿದೆ.
ಸೆಪ್ಟೆಂಬರ್ 7ರಿಂದ ನಿತ್ಯ 10 ಪ್ರದರ್ಶನದಂತೆ ಈವರೆಗೆ 140 ಪ್ರದರ್ಶನಗಳು ನಡೆದಿದ್ದು, ಈವರೆಗೆ 10,000 ಜನರು ವೀಕ್ಷಿಸಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ರೂಪಕ ಹಿನ್ನೆಲೆ:
ಪುರಾಣಗಳ ಪ್ರಕಾರ ಹರಿಹರ ಈ ಹಿಂದೆ ‘ಗುಹಾರಣ್ಯ’ ಎಂದು ಪ್ರಸಿದ್ಧಿ ಪಡೆದಿತ್ತು. ಇಲ್ಲಿದ್ದ ಗುಹಾರಾಕ್ಷಸ ಜನರಿಗೆ, ದೇವತೆಗಳಿಗೆ ಕಂಟಕನಾಗಿ ಪರಿಣಮಿಸಿದ್ದ. ಆತ ಯಾವುದೇ ವ್ಯಕ್ತಿ, ದೇವ, ದೇವತೆಯಿಂದ ಸಾವು ಬರದಂತೆ ವರವನ್ನು ಪಡೆದಿದ್ದ.
ಆಗ ಹರಿ ಮತ್ತು ಹರರು ಒಂದು ದೇಹಿಯಾಗಿ ರೂಪಾಂತರಗೊಂಡು ಆತನನ್ನು ವಧಿಸುತ್ತಾರೆ. ಹರಿ ಮತ್ತು ಹರರು ಒಂದಾಗಿ ಸಾಮರಸ್ಯ ಸಾರಿದ ಸಂದೇಶ ಈ ರೂಪಕದಲ್ಲಿದೆ.
ರೂಪಕಕ್ಕೆ ರಾಜು ನವಲೆ ತಂತ್ರಜ್ಞ, ಕಲಾವಿದ ರಘುನಾಥ್ ವೈ.ಬಿ. ಚಿತ್ರಕಲೆ ಸೇವೆ ನೀಡಿದ್ದಾರೆ.
ಸಾರ್ವಜನಿಕ ವಿನಾಯಕ ಸಂಘದ ಅಧ್ಯಕ್ಷ ಕೆ.ಜಿ.ಸಿದ್ದೇಶ್, ಪ್ರಧಾನ ಕಾರ್ಯದರ್ಶಿ ಸಂತೋಷ್ ನೋಟದವರ್, ಖಜಾಂಚಿ ಇ.ಮಂಜುನಾಥ್, ಸಹಕಾರ್ಯದರ್ಶಿ ಪ್ರವೀಣ್ ಜಿ.ವಿ., ಕಂಚಿಕೇರಿ ಚಿದಾನಂದ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಹಾಗೂ ಸಮಿತಿಯ ಪದಾಧಿಕಾರಿಗಳು, ಜನಪ್ರತಿನಿಧಿಗಳು ರೂಪಕವನ್ನು ಸಿದ್ಧಗೊಳಿಸುವಲ್ಲಿ ಶ್ರಮಿಸಿದ್ದಾರೆ.
ನಾಳೆ ವಿಸರ್ಜನೆ:
ವಿನಾಯಕ ಸಂಘದ ಗಣೇಶ ಮೂರ್ತಿ ಸೆ.23ರಂದು ವಿಸರ್ಜನೆಗೊಳ್ಳಲಿದೆ. ಸಂಜೆ 4ಕ್ಕೆ ಮೆರವಣಿಗೆ ಆರಂಭವಾಗಲಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಮುಖಂಡರ ನೇತೃತ್ವದಲ್ಲಿ ವಿಸರ್ಜನಾ ಕಾರ್ಯ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.