ADVERTISEMENT

ಜನಪರ, ಪ್ರಜಾತಂತ್ರದ ಧ್ವನಿಯಾಗಿದ್ದ ಗೌರಿ: ಗುರುಮೂರ್ತಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 13:33 IST
Last Updated 29 ಜನವರಿ 2020, 13:33 IST
ಗೌರಿ ಲಂಕೇಶ್‌ ಜನ್ಮದಿನದ ಅಂಗವಾಗಿ ದಾವಣಗೆರೆ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಕಚೇರಿಯಲ್ಲಿ ಗೌರಿ ಲಂಕೇಶ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು
ಗೌರಿ ಲಂಕೇಶ್‌ ಜನ್ಮದಿನದ ಅಂಗವಾಗಿ ದಾವಣಗೆರೆ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಕಚೇರಿಯಲ್ಲಿ ಗೌರಿ ಲಂಕೇಶ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು   

ದಾವಣಗೆರೆ: ಜನ ಪರವಾಗಿ, ಪ್ರಜಾತಂತ್ರ ಮೌಲ್ಯದ ಧ್ವನಿಯಾಗಿ ನಿರಂತರ ಕೆಲಸ ಮಾಡಿದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‌ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಗುರುಮೂರ್ತಿ ಹೇಳಿದರು.

ಗೌರಿ ಲಂಕೇಶ್‌ ಜನ್ಮ ದಿನದ ಪ್ರಯುಕ್ತ ದಾವಣಗೆರೆ ಪ್ರಗತಿ ಪರ ಒಕ್ಕೂಟವು ಇಲ್ಲಿನ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾತ್ಯತೀತ, ಸೌಹಾರ್ದ ಸಮಾಜಕ್ಕಾಗಿ ಭಿನ್ನ ಚಿಂತನೆ, ನಂಬಿಕೆಗಳನ್ನು ಇಟ್ಟುಕೊಂಡು ನಿರ್ಭೀತಿಯಿಂದ ಚಟುವಟಿಕೆ ಮಾಡುತ್ತಿದ್ದರು. ದೇಶದ ಯಾವುದೇ ಮೂಲೆಗಳಲ್ಲಿ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದವರು ತನ್ನ ಮಕ್ಕಳು ಎಂದು ಭಾವಿಸುತ್ತಿದ್ದರು. ಗೌರಿ ಇಟ್ಟುಕೊಂಡ ನಿಲುವುಗಳಿಗಾಗಿ, ಮಾಡಿದ ಹೋರಾಟಗಳಿಗಾಗಿ ಮನುವಾದಿಗಳಿಂದ ಹತ್ಯೆಯಾದರು ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸಂವಿಧಾನದ ಉಳಿವಿಗಾಗಿ ಕರ್ನಾಟಕ ಟಿ. ಅಸ್ಗರ್‌ ಮಾತನಾಡಿ, ‘2006ರ ಡಿಸೆಂಬರ್‌ನಲ್ಲಿ ಚಿಕ್ಕಮಗಳೂರಿನಲ್ಲಿ ಸೌಹಾರ್ದ ನಡಿಗೆ ಮಾಡಿದ್ದಕ್ಕಾಗಿ ಪೊಲೀಸರು ಜೈಲಿಗೆ ಹಾಕಿದ ತಂಡದಲ್ಲಿ ಗೌರಿ ಜತೆಯಲ್ಲಿ ನಾನೂ ಇದ್ದೆ. ಬಲಪಂಥೀಯರ ಅನ್ಯಾಯ, ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಗೌರಿಯನ್ನು ಕೊಂದಿರಬಹುದು. ಆದರೆ ಅವರ ವಿಚಾರಗಳನ್ನು ಕೊಲ್ಲಲು ಬಿಡುವುದಿಲ್ಲ’ ಎಂದು ತಿಳಿಸಿದರು.

ಪತ್ರಿಕೆಯ ಸಂಪಾದಕರಾಗಿ ಮಾತ್ರ ಉಳಿಯಲಿಲ್ಲ. ದಿಟ್ಟ ಹೋರಾಟಗಾರ್ತಿಯಾಗಿ ಬಡವರ ರೈತರ ಕಾರ್ಮಿಕರ ವಿದ್ಯಾರ್ಥಿಗಳ, ಯುವಜನರ ಜೊತೆ ನಿಲ್ಲುತ್ತಿದ್ದರು ಎಂದು ನೆರಳು ಬೀಡಿ ಕಾರ್ಮಿಕರ ಯುನಿಯನ್‌ನ ಕರಿಬಸಪ್ಪ ನೆನಪಿಸಿಕೊಂಡರು.

ಭೀಮ್ ಆರ್ಮಿಯ ಅಬ್ದುಲ್ ಘನಿ, ಸಂವಿಧಾನ ಉಳಿವಿಗಾಗಿ ವೇದಿಕೆಯ ಅಬ್ದುಲ್ ಆಸೀಫ್‌, ಪ್ರವೀಣ್, ಜೆಡಿಎಸ್‌ನ ಎಂ. ರಾಜಾಸಾಬ್, ಕೋಮು ಸೌಹಾರ್ದ ವೇದಿಕೆಯ ಸಾಜೀದ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.