ದಾವಣಗೆರೆ: ರಾಜ್ಯ ಸರ್ಕಾರದಲ್ಲಿ ಆರ್ಎಸ್ಎಸ್ ಅನಧಿಕೃತ ಹಸ್ತಕ್ಷೇಪ ಮಾಡಬಾರದು. ಹೈಕಮಾಂಡ್ ಕೂಡ ಬಿ.ಎಸ್. ಯಡಿಯೂರಪ್ಪ ಅವರಿಗೆ ಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಅಭಿನವ ಅನ್ನದಾನ ಸ್ವಾಮೀಜಿ ಒತ್ತಾಯಿಸಿದರು.
ಇಲ್ಲಿನ ಅನ್ನದಾನೇಶ್ವರ ಶಾಖಾಮಠದಲ್ಲಿ ಭಾನುವಾರ ನಡೆದ ಲಿಂಗೈಕ್ಯ ಗುರು ಅನ್ನದಾನ ಮಹಾಶಿವಯೋಗಿಯವರ 42ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅವರು ಮುಖ್ಯಮಂತ್ರಿ ಆದ ಮೇಲೆ ಮಂತ್ರಿಮಂಡಲ ರಚನೆ ಮಾಡಲು 15 ದಿನಗಳಾದವು. ಖಾತೆ ಹಂಚಲು ಮತ್ತೆ 8 ದಿನಗಳು ಕಳೆದವು. ಈ ರೀತಿ ಹೈಕಮಾಂಡ್ ನಿಯಂತ್ರಿಸುವುದು ಸರಿಯಲ್ಲ. ಹೈಕಮಾಂಡ್ ಕೂಡ ಆರ್ಎಸ್ಎಸ್ನ ಎಷ್ಟು ಮಾತು ಕೇಳಬೇಕೋ ಅಷ್ಟಕ್ಕೇ ಸೀಮಿತಗೊಳಿಸಬೇಕು. ಎಲ್ಲವನ್ನೂ ಆರ್ಎಸ್ಎಸ್ ಕೇಳಿ ನಿರ್ಧರಿಸಬಾರದು. ಎಲ್ಲ ಕಂಟ್ರೋಲ್ ಮಾಡಲು ಹೋದರೆ ಸರಿ ಹೋಗದು ಎಂದು ಎಚ್ಚರಿಸಿದರು.
ಹೈಕಮಾಂಡ್ ಪೂರ್ಣ ಸ್ವಾತಂತ್ರ್ಯ ನೀಡಿದರೆ ಮೂರೂವರೆ ವರ್ಷಗಳಲ್ಲಿ ಕರ್ನಾಟಕದ ಚಿತ್ರಣ ಬದಲಾಯಿಸುವ ಶಕ್ತಿ ಯಡಿಯೂರಪ್ಪ ಅವರಿಗೆ ಇದೆ. 76 ವರ್ಷಗಳಾಗಿದ್ದರೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಯುವಕರನ್ನು ಮೀರಿಸುವ ರೀತಿ ಸುತ್ತಾಡಿದ್ದಾರೆ. ₹ 33 ಸಾವಿರ ಕೋಟಿ ನಷ್ಟವಾಗಿದ್ದನ್ನು ಗುರುತಿಸಿ ಪ್ರಧಾನಿ ಮತ್ತು ಪಕ್ಷದ ಅಧ್ಯಕ್ಷರಿಗೆ ಹೇಳಿದ್ದಾರೆ. ಅಷ್ಟು ಪರಿಹಾರಬಿಡುಗಡೆ ಮಾಡಲಿ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.