ಮಲೇಬೆನ್ನೂರು: ಗ್ರಾಮದ ದೇವತೆ ಹೊರಗಿನಮ್ಮನ ದೇವಾಲಯದ ಎದುರು ಶುಕ್ರವಾರ ಹುಲುಸು ಒಡೆಯುವ ಮೂಲಕ ಉತ್ಸವಕ್ಕೆ ಶುಕ್ರವಾರ ತೆರೆ ಬಿದ್ದಿತು.
ದೇವಾಲಯದಲ್ಲಿ ಸಾಂಪ್ರದಾಯಿಕ ಪೂಜಾವಿಧಿ ವಿಧಾನ ನೆರವೇರಿಸಿದ ನಂತರ ಮಹಿಳೆಯರು ಏಕನಾಥೇಶ್ವರಿ ಹಾಗೂ ಕೋಡಿ ಮಾರೇಶ್ವರಿಗೆ ಉಡಿ ತುಂಬಿದರು.
ಬಲಿ ನೀಡಿದ್ದ ಹಿಟ್ಟಿನ ಕೋಣದ ತಲೆ ಹಾಗೂ ಹುಲುಸು ರಾಶಿಗೆ ಪೂಜೆ ಸಲ್ಲಿಸಿ ಪರಾಕು ಹೇಳಿ, ಪ್ರಾರ್ಥಿಸಿದರು.
ಗ್ರಾಮದ ಶ್ಯಾನುಭೋಗ, ಗೌಡ, ಬಣಕಾರ, ಪಟೇಲ, ತೋಟಿ ತಳವಾರ ಸಮುದಾಯದ ಮುಖಂಡರಿಗೆ, ಸಾರ್ವಜನಿಕರಿಗೆ ಹುಲುಸು ಹಂಚಲಾಯಿತು.
ಹುಲುಸು ಧಾನ್ಯವನ್ನು ಬಿತ್ತನೆ ವೇಳೆ ಬಳಸಿದರೆ ಉತ್ತಮವಾದ ಬೆಳೆ ಬರುವುದು ಎಂಬುದು ನಂಬಿಕೆ. ಜನರು ಮುಗಿಬಿದ್ದು ಹುಲುಸು ಪಡೆದರು.
ಏಕನಾಥೇಶ್ವರಿ ಹಾಗೂ ಕೋಡಿ ಮಾರೇಶ್ವರಿ ಉತ್ಸವ ಮೂರ್ತಿಗಳನ್ನು ಮಂಗಳವಾದ್ಯ, ಡೊಳ್ಳು, ನಾಸಿಕ್ ಡೋಲಿನ ವಾದನದೊಂದಿಗೆ ದೇವಾಲಯಕ್ಕೆ ಕರೆತರುವ ಮೂಲಕ ಉತ್ಸವಕ್ಕೆ ತೆರೆ ಬಿದ್ದಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.