
ಹರಿಹರ: ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ನಗರಠಾಣೆ ಪೊಲೀಸರು, ಬಂಧಿತರಿದ ಒಟ್ಟು 30 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ದೊಡ್ಡಲಿಂಗೇನಹಳ್ಳಿ ಗ್ರಾಮದ ಪ್ರತಾಪ ಮತ್ತು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕು ಗದ್ದಿಕೆರೆ ಗ್ರಾಮದ ಭೋಜರಾಜ್ ಬಂಧಿತ ಆರೋಪಿಗಳು.
ಬಂಧಿತರು ಅ. 17ರಂದು ಕಳ್ಳತನ ಮಾಡಿದ್ದ ಬೈಕ್ನಲ್ಲಿ ನಗರದ ಹರಪನಹಳ್ಳಿ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಪೊಲೀಸರು ತಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇವರು ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ ವಾಹನಗಳನ್ನು ಹಲವರಿಗೆ ಮಾರಾಟ ಮಾಡಿದ್ದು, ನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಾರಾಟ ಮಾಡಿದ್ದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಒಂದು ವರ್ಷದ ಅವಧಿಯಲ್ಲಿ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ದಾಖಲಾಗಿರುವ ತಲಾ 6, ವಿಜಯನಗರ ಜಿಲ್ಲೆಯ 5, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಯ ತಲಾ 3, ಗದಗ ಜಿಲ್ಲೆಯ 2 ಮತ್ತು ಹಾವೇರಿ, ಚಿಕ್ಕಮಗಳೂರು, ರಾಮನಗರ, ಬಿಜಾಪುರ, ಚಿಕ್ಕಬಳ್ಳಾಪುರ ಜಿಲ್ಲೆಗಳ ತಲಾ ಒಂದು ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಿವೆ.
ಆರೋಪಿಗಳಿಂದ ಕಳ್ಳತನದ ವಿಧಾನ, ಬಳಸಿದ ಉಪಕರಣಗಳು ಹಾಗೂ ವಾಹನಗಳನ್ನು ಮಾರಾಟ ಮಾಡಿದ್ದರ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ಈ ಜಾಲದಲ್ಲಿ ಭಾಗಿಯಾಗಿರುವ ಇನ್ನೂ ಹಲವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಡಿವೈಎಸ್ಪಿ ಬಿ.ಎಸ್. ಬಸವರಾಜ, ನಗರಠಾಣೆ ಇನ್ಸ್ಪೆಕ್ಟರ್ ಆರ್.ಎಫ್. ದೇಸಾಯಿ, ಪಿಎಸ್ಐ ಶ್ರೀಪತಿ ಗಿನ್ನಿ, ಎಎಸ್ಐ ಜಬಿವುಲ್ಲಾ, ಸಿಬ್ಬಂದಿ ನಾಗರಾಜ ಸುಣಗಾರ, ದಿಲೀಪ್ ಕೆ.ಸಿ., ಶಾಂತರಾಜ್. ಎಂ.ಎಸ್., ಸಿದ್ದೇಶ್ ಎಚ್., ಮಂಜುನಾಥ್ ಕ್ಯಾತಮ್ಮನವರ್, ದೇವರಾಜ್ ಸೂರ್ವೆ, ರುದ್ರಸ್ವಾಮಿ.ಕೆ.ಸಿ., ಹನುಮಂತಪ್ಪ ಗೋಪನಾಳ, ರವಿ ಆರ್., ರಂಗನಾಥ್, ರಾಮಚಂದ್ರ ಜಾಧವ್, ಶಿವಕುಮಾರ್, ರಮೇಶ್ ಅವರ ಕಾರ್ಯವನ್ನು ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.