
ಹರಿಹರ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಕ್ರಮವನ್ನು ಕಾಲೇಜು ಹಂತದಲ್ಲಿ ಪ್ರತಿ ವಿದ್ಯಾರ್ಥಿಗೂ ಕಲಿಸುವ ಅಗತ್ಯವಿದೆ ಎಂದು ಇನ್ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆ ಸ್ಥಾಪಕ ಜಿ.ಬಿ. ವಿನಯ್ ಕುಮಾರ್ ಹೇಳಿದರು.
ನಗರದ ಶ್ರೀಮತಿ ಆರ್. ಗಿರಿಯಮ್ಮ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಯಿಂದ ಆಯೋಜಿಸಿದ್ದ ಐಎಎಸ್, ಕೆಎಎಸ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಹುತೇಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸ್ಪರ್ಧಾತ್ಮ ಪರೀಕ್ಷೆಗಳ ಮೂಲಕವೇ ನಡೆಯುತ್ತದೆ. ಕಾಲೇಜು ಹಂತದಲ್ಲೇ ಈ ಕುರಿತು ಸೂಕ್ತ ಮಾರ್ಗದರ್ಶನ ನೀಡಿದರೆ ವಿದ್ಯಾರ್ಥಿಗಳು ಸೂಕ್ತ ಹುದ್ದೆಗೆ ಆಯ್ಕೆಯಾಗಲು ಸಾದ್ಯ ಎಂದರು.
ಸಾಮಾಜಿಕವಾಗಿ, ಆರ್ಥಿಕವಾಗಿ ಒಂದು ಸಮುದಾಯ, ಕುಟುಂಬ ಅಭಿವೃದ್ಧಿ ಸಾಧಿಸಲು ಶಿಕ್ಷಣವೇ ರಹದಾರಿಯಾಗಿದೆ. ಕ್ಷಣ ಕಾಲದ ಆರ್ಥಿಕ ಸಮಸ್ಯೆಯಿಂದ ಶಿಕ್ಷಣ ಪಡೆಯುವುದನ್ನು ಮೊಟಕುಗೊಳಿಸಬಾರದು. ದೊಡ್ಡ ಸಾಧನೆ ಮಾಡುವ ಕನಸು ಹೊತ್ತು ಶ್ರಮವಹಿಸಿ ಸಿದ್ಧತೆ ಮಾಡಿಕೊಳ್ಳಬೇಕೆಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ತಿಳಿಸಿದರು.
ಸರ್ಕಾರಿ ನೌಕರಿಯನ್ನು ಲಂಚ ನೀಡದೆ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆ ಉತ್ತಮ ಮಾರ್ಗವಾಗಿದೆ. ಈ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿರುವ ವಿನಯ್ ಕುಮಾರ್ ಅವರ ಕಾರ್ಯ ಶ್ಲಾಘನೀಯ ಎಂದು ಸಾಮಾಜಿಕ ಕಾರ್ಯಕರ್ತ ಬಿ.ಮಗ್ದುಮ್ ಹೇಳಿದರು.
ಪ್ರಾಚಾರ್ಯ ಅಜ್ಜೂರು ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಇನ್ಸೈಟ್ಸ್ ಸಂಸ್ಥೆಯ ಶಿವಕುಮಾರ್ ಸಂಬಳಿ, ಬಟ್ಟಲಕಟ್ಟೆಯ ಪರಶುರಾಮ್, ಗ್ರಂಥಪಾಲಕಿ ವೀಣಾ, ಅಧ್ಯಾಪಕರು ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.