ಹರಿಹರ: ರಾಜ್ಯದ ರೈತರು ಹಾಗೂ ಬಡವರ ಪರ ಆಡಳಿತ ನೀಡುವ ಪ್ರಾಮಾಣಿಕತೆ ಜೆಡಿಎಸ್ ಪಕ್ಷಕ್ಕೆ ಮಾತ್ರವಿದೆ ಎಂದು ಪಕ್ಷದ ಯುವ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
‘ಜನರೊಂದಿಗೆ ಜನತಾದಳ’ ಅಭಿಯಾನದ ನಿಮಿತ್ತ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರ ನಡೆಸಿದಾಗಲೆಲ್ಲಾ ರೈತರು, ಜನ ಸಾಮಾನ್ಯರಿಗೆ ನೆರವಾಗಿದೆ. ರಾಜ್ಯದಲ್ಲಿ ಸಾಮರಸ್ಯದ ವಾತಾವರಣವನ್ನು ಪಕ್ಷ ಸೃಷ್ಟಿಸಿತ್ತು ಎಂದರು.
ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಲಾಗಿತ್ತು. ಇದರಿಂದ ತಾಲ್ಲೂಕಿನ ರೈತರ ₹50 ಕೋಟಿಯಷ್ಟು ಮೊತ್ತದ ಸಾಲ ಮನ್ನಾ ಆಗಿತ್ತು. ಈಗ ಕೇಂದ್ರ ಕೃಷಿ ಸಚಿವರೊಂದಿಗೆ ಚರ್ಚಿಸಿದ ಫಲವಾಗಿ ರಾಜ್ಯದ ತಂಬಾಕು ಮತ್ತು ಮಾವು ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯವಾಗಿದ್ದು, ಅಭಿವೃದ್ಧಿ ಕುಸಿದಿದೆ. ರೈತರಿಗೆ ಗೊಬ್ಬರ ಒದಗಿಸುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಶೀಘ್ರವೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಘೋಷಣೆಯಾಗಲಿದ್ದು, ಪಕ್ಷ ಸಂಘಟನೆಗೆ ಕಾರ್ಯಕರ್ತರು ಒತ್ತು ನೀಡಬೇಕು. ಮಿಸ್ಡ್ ಕಾಲ್ ಕೊಟ್ಟು ಸದಸ್ಯತ್ವ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಹರಿಹರ ತಾಲ್ಲೂಕಿನಲ್ಲಿ ಮುಂದಿನ 30 ದಿನಗಳಲ್ಲಿ 20,000 ಸದಸ್ಯತ್ವ ಮಾಡಬೇಕಾಗಿದೆ ಎಂದು ಸೂಚಿಸಿದರು.
ನಿಗದಿಗಿಂತ 3 ಗಂಟೆ ತಡವಾಗಿ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದ ಯುವಕರು ಬೈಪಾಸ್ನಿಂದ ಬೈಕ್ ರ್ಯಾಲಿ ಮೂಲಕ ಕರೆ ತಂದರು. ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಬಿ.ಚಿದಾನಂದಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟರಾಮ್ ನಾಡಗೌಡ, ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ್, ಪಾವಗಡ ತಿಮ್ಮರಾಯಪ್ಪ, ಚೌಡಾರೆಡ್ಡಿ, ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಆಂಜನಪ್ಪ, ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ಜಯಣ್ಣ, ಮಾಯಕೊಂಡ ಆನಂದಪ್ಪ, ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷ ಪರಮೇಶ್ವರಪ್ಪ ಹರಳಹಳ್ಳಿ, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಹಾಗೂ ಸದಸ್ಯರು ಭಾಗವಹಿಸಿದ್ದರು.
ಪಕ್ಷದಲ್ಲಿ ಬೆಳೆದು ಬೇರೆಡೆ ವಲಸೆ ಹೋದವರ ಸಂಖ್ಯೆ ದೊಡ್ಡದಿದೆ. ಆದರೆ ಮಾಜಿ ಶಾಸಕ ಶಿವಶಂಕರ್ ಮಾತ್ರ ಪಕ್ಷದಲ್ಲಿ ಅಚಲವಾಗಿ ನಿಂತಿದ್ದಾರೆ. ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಅವರ ಭಾವನೆ ಇದಕ್ಕೆ ಕಾರಣ. ಮುಂದಿನ ಬಾರಿ ಅವರನ್ನು ಗೆಲ್ಲಿಸಿ
-ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.