ಕಡರನಾಯ್ಕನಹಳ್ಳಿ: ಮನೆಯ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಡೆಂಗಿಯಂತಹ ಮಾರಣಾಂತಿಕ ಕಾಯಿಲೆಯನ್ನು ನಿರ್ಮೂಲನೆಗೊಳಿಸಲು ಸಹಕರಿಸಬೇಕು ಎಂದು ದಾವಣಗೆರೆ ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಂ.ವಿ.ಹೊರಕೇರಿ ಮಾತನಾಡಿದರು.
ಸಮೀಪದ ಉಕ್ಕಡಗಾತ್ರಿ ಗ್ರಾಮದಲ್ಲಿ ಶುಕ್ರವಾರ ಲಾರ್ವಾ ಸಮೀಕ್ಷೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಸಿವಾಗದಿರುವುದು, ಅತಿಸಾರ, ವಾಂತಿ, ಮೂಗಿನಲ್ಲಿ ರಕ್ತ ಸ್ರಾವ, ಕೀಲು ನೋವು, ಚರ್ಮದ ಮೇಲೆ ತುರಿಕೆ ಮತ್ತು ಗಾಯಗಳು ಡೆಂಗಿಯ ಪ್ರಮುಖ ಲಕ್ಷಣಗಳು. ಈ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವರು ಸಲಹೆ ನೀಡಿದರು.
ಮನೆಯ ಸುತ್ತ ಮುತ್ತ ಬಳಸಿದ ಪ್ಲಾಸ್ಟಿಕ್ ಕಪ್, ಬಾಟಲಿಗಳು, ನೀರಿನ ಬ್ಯಾರೆಲ್ಗಳು, ಹೂವಿನ ಕುಂಡದಂತಹ ತ್ಯಾಜ್ಯಗಳಲ್ಲಿ ಲಾರ್ವಾಗಳು ಹೆಚ್ಚಾಗಿ ಜೀವಿಸುತ್ತವೆ. ಇವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಹರಿಹರ ತಾಲ್ಲೂಕು ಹಿರಿಯ ಪ್ರಾಥಮಿಕ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮ್ಮಣ್ಣ ತಿಳಿಸಿದರು.
ಆರೋಗ್ಯ ಇಲಾಖೆಯ ಶೋಭಾ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.