ಮಲೇಬೆನ್ನೂರು: ಭಾನುವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹೋಬಳಿ ವ್ಯಾಪ್ತಿಯ ಹಲವೆಡೆ ಹಳ್ಳಗಳು ಉಕ್ಕಿ ಹರಿಯುತ್ತಿದ್ದು, ಮೆಕ್ಕೆ ಜೋಳದ ಹೊಲ, ಭತ್ತದಗದ್ದೆ, ತಂಗು, ಅಡಿಕೆ ತೋಟ ಜಲಾವೃತವಾಗಿವೆ.
4 ಗಂಟೆಗೂ ಹೆಚ್ಚುಕಾಲ ಎಡಬಿಡದೆ ಮಳೆಯಾಗಿದ್ದು, ಹಳ್ಳದಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದೆ ಎಂದು ರೈತ ಜಿಗಳಿ ಹನುಮಗೌಡ ಮಾಹಿತಿ ನೀಡಿದರು.
ಕಟಾವಿಗೆ ಸಿದ್ಧವಾಗಿದ್ದ ಮೆಕ್ಕೆಜೋಳ ತೊಯ್ದು ತೊಪ್ಪೆಯಾಗಿದ್ದು, ಹೊಲದೊಳಗೆ ಕಾಲಿಡಲು ಸಾಧ್ಯವಾಗುತ್ತಿಲ್ಲ. ತೆನೆ ಮೊಳಕೆ ಬರುವ ಪರಿಸ್ಥಿತಿ ಎದುರಾಗಿದೆ ಎಂದು ಕೊಪ್ಪದ ಬೀರಪ್ಪ ಬೇಸರ ವ್ಯಕ್ತಪಡಿಸಿದರು.
ಮಳೆಯಿಂದ ಭತ್ತಕ್ಕೆ ಕಾಡುತ್ತಿದ್ದ ರೋಗ ನಿಯಂತ್ರಣಕ್ಕೆ ಬಂದಿದೆ ಎಂದು ಕುಂಬಳೂರಿನ ಶರಣ ಮುದ್ದಣ ಸಾವಯವ ಕೃಷಿಕರ ಬಳಗದ ಸಂಚಾಲಕ ಆಂಜನೇಯ ತಿಳಿಸಿದರು.
ಚೆನ್ನಾಗಿ ಬಿಸಿಲು ಬಿದ್ದು ನಂತರ ಮಳೆಯಾಗುತ್ತಿರುವುದರಿಂದ ಅಡಿಕೆ ತೋಟಕ್ಕೆ ಅನುಕೂಲವಾಗಿದೆ. ತೆಂಗಿನ ಬೆಳೆಗೆ ಕಾಡುವ ನುಸಿ ಪೀಡೆ ನಿಯಂತ್ರಣಕ್ಕೆ ಸಹಕಾರಿಯಾಗಿದೆ ಕುಂಬಳೂರಿನ ಚಂದ್ರು ತಿಳಿಸಿದರು.
ಸೂಳೆಕೆರೆ, ಸಂಕ್ಲೀಪುರದ ಹಳ್ಳ, ಭದ್ರಾ ನಾಲೆ ಭರ್ತಿಯಾಗಿ ಹರಿಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.