ADVERTISEMENT

ದಾವಣಗೆರೆ: ಜೀವ, ಜೀವನ ಕಳೆದುಕೊಂಡವರಿಗೆ ನೆರವಾಗಿ

ವಾದ್ಯಗೋಷ್ಠಿ ಕಲಾವಿದರ ಜಿಲ್ಲಾ ಘಟಕ ಉದ್ಘಾಟಿಸಿದ ಬಸವಪ್ರಭು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 4:46 IST
Last Updated 8 ಮಾರ್ಚ್ 2021, 4:46 IST
ದಾವಣಗೆರೆಯಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಮಹಾ ಸಂಘದ ಜಿಲ್ಲಾ ಘಟಕ ಉದ್ಘಾಟನೆ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ರಾಜನ್‌ನಾಗೇಂದ್ರ ಅವರ ಸ್ಮರಣಾರ್ಥವಾಗಿ ಆಯೋಜಿಸಿದ್ದ ಗೀತೋತ್ಸವ ಕಾರ್ಯಕ್ರಮವನ್ನು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಉದ್ಘಾಟಿಸಿದರು
ದಾವಣಗೆರೆಯಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಮಹಾ ಸಂಘದ ಜಿಲ್ಲಾ ಘಟಕ ಉದ್ಘಾಟನೆ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ರಾಜನ್‌ನಾಗೇಂದ್ರ ಅವರ ಸ್ಮರಣಾರ್ಥವಾಗಿ ಆಯೋಜಿಸಿದ್ದ ಗೀತೋತ್ಸವ ಕಾರ್ಯಕ್ರಮವನ್ನು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಉದ್ಘಾಟಿಸಿದರು   

ದಾವಣಗೆರೆ: ಕೊರೊನಾ ಎಂಬ ಸೋಂಕು ಕೆಲವರ ಜೀವ, ಹಲವರ ಜೀವನವನ್ನು ಕಸಿದುಕೊಂಡಿದೆ. ಕಲಾವಿದರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅಂಥವರ ನೆರವಿಗೆ ಸಂಘ, ಸರ್ಕಾರ ಬರಬೇಕು ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ದಾವಣಗೆರೆಯ ಪಾಲಿಕೆ ಕಚೇರಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಮಹಾ ಸಂಘದ ಜಿಲ್ಲಾ ಘಟಕ ಉದ್ಘಾಟನೆ, ಎಸ್‌.ಪಿ. ಬಾಲಸುಬ್ರಹ್ಮಣ್ಯ ಮತ್ತು ರಾಜನ್‌ ನಾಗೇಂದ್ರ ಅವರ ಸ್ಮರಣಾರ್ಥವಾಗಿ ಆಯೋಜಿಸಿದ್ದ ಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾದ್ಯಗೋಷ್ಠಿಯ ರಾಜ್ಯ ಮತ್ತು ಜಿಲ್ಲಾ ಘಟಕ ಆರಂಭಗೊಂಡಿರುವುದು ಉತ್ತಮ ವಿಚಾರ. ಎಲ್ಲರೂ ಸಂಘಟಿತರಾಗಿ ಸರ್ಕಾರದ ಮುಂದೆ ಸಮಸ್ಯೆಗಳನ್ನು ಇಡಲು ಸಾಧ್ಯವಾದರೆ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ADVERTISEMENT

ಸಂಘದ ರಾಜ್ಯಾಧ್ಯಕ್ಷ ಡಾ.ಆರ್‌. ಶಂಕರ್‌, ‘ರಾಜ್ಯದ 22 ಜಿಲ್ಲೆಗಳಲ್ಲಿ ಸಂಘಟನೆಗಳಿಗೆ ಚಾಲನೆ ನೀಡಲಾಗಿದೆ. ಅನಾರೋಗ್ಯಕ್ಕೆ ತುತ್ತಾದ ಬಡ ಕಲಾವಿದರಿಗೆ ರಾಜ್ಯ ಸಂಘದ ಮೂಲಕ ₹ 10 ಸಾವಿರ ವಿತರಿಸಲಾಗಿದೆ. ಸಂಘದ ಸದಸ್ಯರಾದವರಿಗೆ ವಿಮೆ, ಸಾಲಸೌಲಭ್ಯ ಕಲ್ಪಿಸಲಾಗುತ್ತದೆ. ಸರ್ಕಾರದ ಸವಲತ್ತುಗಳನ್ನು ದೊಡ್ಡ ದೊಡ್ಡ ಕಲಾವಿದರೇ ಪಡೆಯುತ್ತಿದ್ದಾರೆ. ಎಲ್ಲ ಊರುಗಳಲ್ಲಿ ಇರುವ ಬಡ ಕಲಾವಿದರಿಗೂ ತಲುಪಿಸಲು ಶ್ರಮಿಸಬೇಕು’ ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್‌. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಮೇಯರ್‌ ಎಸ್‌.ಟಿ. ವೀರೇಶ್‌, ಮಾಜಿ ಮೇಯರ್‌ ಬಿ.ಜಿ. ಅಜಯ್‌ಕುಮಾರ್‌, ಉಪನ್ಯಾಸಕರಾದ ಡಾ.ಎಚ್‌. ವಿಶ್ವನಾಥ್‌, ಡಾ.ಎ.ಬಿ. ರಾಮಚಂದ್ರಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.