ದಾವಣಗೆರೆ: ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಮಾಡಲು ಉದ್ದೇಶಿಸಿದ್ದ ಪಾದಯಾತ್ರೆಯನ್ನು ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸದೇ ಇದ್ದರೆ ಜ.14ರಂದು ನಡೆಯುವ ಕೃಷಿ ಸಮ್ಮೇಳನದಲ್ಲಿ ರಕ್ತದಾನ ಮಾಡಿ, ಪಾದಯಾತ್ರೆ ಆರಂಭಿಸಲಾಗುವುದು’ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ 41ನೇ ಹುಟ್ಟುಹಬ್ಬವನ್ನು ನಗರದ ಸದ್ಯೋಜ್ಯೋತ ಶಿವಾಚಾರ್ಯ ಹಿರೇಮಠದ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
‘ನನ್ನ ಜನ್ಮಭೂಮಿಯಾದ ದಾವಣಗೆರೆಯಿಂದಲೇ ರಕ್ತದಾನ ಮಾಡುವ ಮೂಲಕ ಹೋರಾಟ ಮಾಡಬೇಕೆಂದಿದ್ದೆ. ಕೂಡಲಸಂಗಮದಿಂದಲೇ ಹೋರಾಟ ಆರಂಭಿಸಿ ಎಂದು ಮೇಯರ್ ಸಲಹೆ ನೀಡಿದ್ದರಿಂದ ಅಲ್ಲಿಂದಲೇ ಆರಂಭಿಸಲಾಗುವುದು. ಬೇಡಿಕೆ ಈಡೇರದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಸಿದರು.
ಮೇಯರ್ ಬಿ.ಜಿ.ಅಜಯ್ಕುಮಾರ್ ರಕ್ತದಾನ ಮಾಡಿದರು. ಜೆಡಿಎಸ್ ಮುಖಂಡ ಶ್ರೀಧರ್ ಪಾಟೀಲ್, ಅಶೋಕ್, ಪ್ರಭುದೇವ್, ಕಾರಿಗನೂರು ಬಸವರಾಜು, ಗಂಗಾಧರ್, ನಾಗರಸನಹಳ್ಳಿ ಬಸವರಾಜು, ವಿರೂಪಾಕ್ಷಪ್ಪ, ಗುಜರಿ ವಿಜಯ್ ಕುಮಾರ್, ತಣಿಗೆರೆ ಶಿವಕುಮಾರ್, ಒಣರೊಟ್ಟಿ ಮಹಾಂತೇಶ್, ಸುಭಾಷ್, ಎಇಇ ಉಮೇಶ್, ಚೇತನ್ ಕೆ., ಶಿವಣ್ಣ, ಬಸವಾಪುರ ಶಶಿಧರ್ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.