ADVERTISEMENT

ದೇಶಕ್ಕೆ ಕ್ಷಾತ್ರ ತೇಜಸ್ಸು ತುಂಬಿದ ಮಹನೀಯರನ್ನು ಗೌರವಿಸಿ: ನವೀನ್‌ ಸುಬ್ರಹ್ಮಣ್ಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 4:36 IST
Last Updated 10 ಫೆಬ್ರುವರಿ 2026, 4:36 IST
ಬಸವಾಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮವನ್ನು ರಾಣೇಬೆನ್ನೂರು ರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದ ಮಹಾರಾಜ್ ಉದ್ಘಾಟಿಸಿದರು
ಬಸವಾಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮವನ್ನು ರಾಣೇಬೆನ್ನೂರು ರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದ ಮಹಾರಾಜ್ ಉದ್ಘಾಟಿಸಿದರು   

ಬಸವಾಪಟ್ಟಣ: ಭಾರತದ ಹಿಂದೂ ಭವ್ಯ ಪರಂಪರೆಯನ್ನು ಜಗತ್ತಿಗೆ ಸಾರಿದ ಮಹನೀಯರ ಆದರ್ಶವನ್ನು ಪಾಲಿಸಿ ಭಾರತ ಮಾತೆಯ ಪುತ್ರರೆನಿಸಬೇಕು ಎಂದು ಸುಳ್ಯದ ಸಾಮಾಜಿಕ ಕಾರ್ಯಕರ್ತ ನವೀನ್‌ ಸುಬ್ರಹ್ಮಣ್ಯ ಹೇಳಿದರು.

ಅವರು ಸೋಮವಾರ ಏರ್ಪಡಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಭಾರತದ ಮಹಾನ್‌ ಚೇತನರಾದ ಛತ್ರಪತಿ ಶಿವಾಜಿ, ಛತ್ರಪತಿ ಸಾಂಭಾಜಿ, ಅಹಲ್ಯಾಬಾಯಿ ಹೋಳ್ಕರ್‌, ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರು, ಬಸವಣ್ಣನವರು, ನಾರಾಯಣಗುರುಗಳು, ರಾಷ್ಟ್ರ ಕವಿ ಕುವೆಂಪುರವರು ತೋರಿದ ಮಾರ್ಗವನ್ನು ಅನುಸರಿಸಿ ಭಾತರದ ಭವ್ಯ ಹಿಂದೂ ಪರಂಪರೆಯನ್ನು ಗಟ್ಟಿಗೊಳಿಸುವ ಕಾರ್ಯ ಹಿಂದೂಗಳಿಂದ ಆಗಬೇಕಿದೆ.ಧರ್ಮ ಎಂದರೆ ಕೇವಲ, ದೇವರ ದರ್ಶನ,ಪೂಜೆ, ಪುನಸ್ಕಾರ, ಜಾತ್ರೆಗಳಲ್ಲ. ಧರ್ಮದಿಂದ ಆಂತರಿಕ ಜಾಗೃತಿ, ಎಲ್ಲರಿಗೂ ಸಮಾನ ಅವಕಾಶ ಮತ್ತು ಗೌರವ ನೀಡುವುದೇ ಧರ್ಮ. ಇಂತಹ ಸರ್ವಗುಣಗಳೂ ಹಿಂದೂ ಧರ್ಮದಲ್ಲಿ ಹಾಸುಹೊಕ್ಕಾಗಿವೆ. ವಂದೇ ಮಾತರಂ ಮತ್ತು ಭಾರತ ಮಾತಾಕೀ ಜೈ ಎಂಬ ಘೋಷಣೆಗಳು ಸ್ವತಂತ್ರ ಹೋರಾಟಕ್ಕೆ ಪ್ರೇರಣೆ ನೀಡಿದವು.ನಮ್ಮ ಪ್ರಾಚೀನ ಪರಂಪರೆ ಉಳಿಯ ಬೇಕಾದರೆ ಅವುಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಮಾತೆಯರು ಇಂದಿನ ಭೋಗ ಜೀವನ ಶೈಲಿಗೆ ಒಳಗಾಗದೇ ಮನೆಗಳಲ್ಲಿ, ದೇವಾಲಯಗಳಲ್ಲಿ ಭಜನೆ ಕಾರ್ಯಕ್ರಮಗಳನ್ನು ನಡೆಸಿ ಎಲ್ಲರನ್ನೂ ಒಳಗೊಂಡ ಸಮಾಜ ಸ್ಥಾಪನೆಗೆ ಬದ್ಧರಾಬೇಕು ಎಂದು ನವೀನ್‌ ಸುಬ್ರಹ್ಮಣ್ಯ ಹೇಳಿದರು.

ADVERTISEMENT

ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಣೇಬೆನ್ನೂರು ರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದ ಮಹಾರಾಜ್‌ ಮಾತನಾಡಿ, ಹಿಂದೂ ಧರ್ಮ ಸನಾತನ ಧರ್ಮವಾಗಿದ್ದು,ಶ್ರೇಷ್ಠ ಪರಂಪರೆ ಹೊಂದಿದೆ. ಆದರೆ ಭಾರತೀಯರು ತಮ್ಮ ದೈಹಿಕ ಸೌಂದರ್ಕ್ಕೆ ಮಾರು ಹೋಗಿ, ಹಿಂದೂ ಧರ್ಮದ ಆಚರಣೆಗೆ ಧಕ್ಕೆ ತಂದಿದ್ದಾರೆ. ಎಂಟನೇ ಶತಮಾನದಲ್ಲಿ ಶಂಕರಾಚಾರ್ಯರ ಕಾಲದಿಂದಲೂ ಭಾರತೀಯರನ್ನು ಜಾಗೃತಗೊಳಿಸಿ ಹಿಂದೂ ಧರ್ಮದ ಪುನರುತ್ಥಾನದ ಕಾರ್ಯ ನಡೆಯುತ್ತಾ ಬಂದಿದೆ. ಆದರೆ 20 ನೇ ಶತಮಾನದಲ್ಲಿ ಸ್ವಾಮಿ ವಿವೇಕಾನಂದರು ಜಗತ್ತಿನಾದ್ಯಂತ ಸಂಚರಿಸಿ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಸಾರಿದಾಗ ಭಾರತದಲ್ಲಿ ಜಾಗೃತಿ ಆರಂಭವಾಯಿತು. ತಮ್ಮ ಗುರು ರಾಮಕೃಷ್ಣ ಪರಮಹಂಸರ ಹೆಸರಿನಲ್ಲಿ ರಾಮಕೃಷ್ಣ ಮಿಷನ್‌ ಸ್ಥಾಪಿಸಿ ಭಾರತ ಸೇರಿದಂತೆ ಜಗತ್ತಿನಾದ್ಯಾಂತ ಶಿಕ್ಷಣ, ಆರೋಗ್ಯ, ಸಮಾಜಸೇವೆ ಮಾಡುವುದರ ಮೂಲಕ ಧರ್ಮ ಜಾಗೃತಿ ಉಂಟು ಮಾಡಿದರು. ಇಂದು ಈಸಂಸ್ಥೆ ಎರಡು ಸಾವಿರ ಶಾಖೆಗಳನ್ನು ಹೊಂದಿ ಸೇವೆ ಮಾಡುತ್ತಾ ಧರ್ಮ ಜಾಗೃತಿ ಉಂಟು ಮಾಡುತ್ತಿದೆ. ಇಂತಹ ಕಾರ್ಯವನ್ನು ನೂರು ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾಡುತ್ತಿದೆ. ಇಂತಹ ಸಂಸ್ಥೆಗಳಿಂದ ಪ್ರೇರಿತರಾಗಿ ದೇಶ ಸೇವೆಗೆ ಜನ್ಮವನ್ನು ಮುಡಿಪಾಗಿಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಿಂದೂ ಸಂಗಮ ಸಮಿತಿಯ ಅಧ್ಯಕ್ಷ ಕೆ.ಎಂ.ವೀರಯ್ಯ ಮಾತನಾಡಿ ನಮ್ಮ ರಾಷ್ಟ್ರ ಎಂಬುದು ಒಂದು ಕುಟುಂಬ. ಇದರಲ್ಲಿ ಯಾವ ಭೇಧ ಭಾವವಿರದೇ ಎಲ್ಲರನ್ನೂ ಸಮಾನತೆಯಿಂದ ಪರಿಗಣಿಸಿ ದೇಶವನ್ನು ಒಂದುಗೂಡಿಸುವ ಪ್ರಯತ್ನ ಮಾಡಬೇಕು. ಇದಕ್ಕೆ ರಾಷ್ಟ್ರೀಯ ಸೇವಕ ಸಂಘ ಉತ್ತಮ ಮಾರ್ಗದರ್ಶಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಮಿತಿಯ ಉಪಾಧ್ಯಕ್ಷ ಜಿ.ಬಿ.ಹಾಲೇಶ್‌, ಕಾರ್ಯಕರ್ತರಾದ ಬಿ.ಜಿ.ಸಚಿನ್‌, ಡಿ.ಆರ್‌.ಹಾಲೇಶ್‌ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮುನ್ನ ಗ್ರಾಮದಲ್ಲಿ ಶೋಭಾ ಯಾತ್ರೆ, ಮಹಿಳೆಯರಿಂದ ಭಜನೆ, ಮಕ್ಕಳಿಂದ ದೇಶ ಭಕ್ತರ, ಸಂತ ಮಹಾಂತರ ವೇಷಭೂಷಣ,ಬಿ.ಅಪೂರ್ವ ಇವರಿಂದ ಭರತನಾಟ್ಯ ನಡೆಯಿತು.ಕಿರಣ್‌ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.

ಬಸವಾಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ಶೋಬಾ ಯಾತ್ರೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.