ಹೊನ್ನಾಳಿ: ತಾಲ್ಲೂಕಿನಲ್ಲಿ 39,716 ಕುಟುಂಬಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ಗುರಿ ಇದ್ದು, ಅ. 4 ರಂದು ಮಧ್ಯಾಹ್ನ 12ಕ್ಕೆ 34,432 ಕುಟುಂಬಗಳನ್ನು ಸರ್ವೇ ಮಾಡಲಾಗಿದೆ ಎಂದು ತಹಶೀಲ್ದಾರ್ ಸಿ. ರಾಜೇಶ್ ಕುಮಾರ್ ಹೇಳಿದರು.
ಶನಿವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಅಂತಿಮ ಹಂತದ ಸಮೀಕ್ಷಾ ಕಾರ್ಯಾಚರಣೆಯ ಸಭೆಯಲ್ಲಿ ಮಾತನಾಡಿದರು.
ಸಮೀಕ್ಷೆಗೆ 360 ಗಣತಿದಾರರು, 18 ಜನ ಮೇಲ್ವಿಚಾರಕರು ಹಾಗೂ 20 ಜನ ಸಮೀಕ್ಷಾದಾರರನ್ನು ನೇಮಿಸಲಾಗಿದೆ. ಈ ತಂಡ ಈಗಾಗಲೇ ಶೇ 86.89 ರಷ್ಟು ಸಮೀಕ್ಷಾ ಕಾರ್ಯವನ್ನು ಮುಗಿಸಿದೆ. ಇನ್ನೊಂದೆರಡು ದಿನಗಳಲ್ಲಿ ನೂರರಷ್ಟು ಗಣತಿ ಕಾರ್ಯವನ್ನು ಮುಗಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಇದೂವರೆಗು ಚುರುಕಾಗಿ ಗಣತಿ ಕಾರ್ಯ ನಡೆದಿತ್ತು. ಈಗ ಅಂತಿಮ ಹಂತಕ್ಕೆ ತಲುಪಿದ್ದು, ಕರಾರುವಕ್ಕಾಗಿ ಗಣತಿ ಮಾಡಬೇಕಾಗಿರುವುದರಿಂದ ಸ್ವಲ್ಪ ನಿಧಾನವಾಗಿ ಗಣತಿ ಮಾಡಬೇಕಾಗಿದೆ ಎಂದು ಹೇಳಿದರು.
ಅಂದಾಜು 95 ಶಿಕ್ಷಕರು ನೂರಕ್ಕೆ ನೂರರಷ್ಟು ಗಣತಿ ಕಾರ್ಯವನ್ನು ಮುಗಿಸಿದ್ದು, ಅವರನ್ನು ಅಭಿನಂದಿಸಲಾಯಿತು ಎಂದು ತಿಳಿಸಿದರು.
ಸಮೀಕ್ಷೆಗೆ ಸಂಬಂಧಿಸಿದಂತೆ ಹೊನ್ನಾಳಿ, ನ್ಯಾಮತಿ ಅವಳಿ ತಾಲ್ಲೂಕಿನ ನೋಡಲ್ ಅಧಿಕಾರಿಯಾಗಿ ದೂಡಾ ಆಯುಕ್ತರಾದ ಹುಲ್ಮನಿ ತಿಮ್ಮಣ್ಣ ಕಾರ್ಯನಿರ್ವಹಿಸುತ್ತಿದ್ದು, ಮೂರು ದಿನಗಳ ಹಿಂದೆ ಅವಳಿ ತಾಲ್ಲೂಕಿನ ಗ್ರಾಮಗಳಿಗೆ ಭೇಟಿ ನೀಡಿ ಗಣತಿ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದ್ದರು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.