ಹೊನ್ನಾಳಿ: ‘ಸಾಧು, ಸಂತರ ಸಹವಾಸದಿಂದ ಪುಣ್ಯಕ್ಷೇತ್ರಗಳಿಗೆ ಹೋಗಿ ಬಂದಷ್ಟು ಪುಣ್ಯ ಲಭಿಸುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಮಠ–ಮಾನ್ಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಕರೆದುಕೊಂಡು ಬಂದು ಸನ್ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸಲಹೆ ನೀಡಿದರು.
ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಶನಿವಾರ ನಡೆದ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹಿರೇಕಲ್ಮಠವು ಈ ಭಾಗದ ಭಕ್ತರ ಒಳಿತಿಗೋಸ್ಕರ ಹಲವಾರು ಪೂಜಾ ಕೈಂಕರ್ಯ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಭಕ್ತರು ಕುಟುಂಬ ಸಮೇತರಾಗಿ ಪಾಲ್ಗೊಂಡು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಹೇಳಿದರು.
‘ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬಗಳ ಆಚರಣೆಯಿಂದ ಮನುಕುಲಕ್ಕೆ ಒಳಿತಾಗುತ್ತಿದ್ದು, ಹಬ್ಬಗಳ ವಿಧಿ, ವಿಧಾನಗಳನ್ನು ಅರಿತು ಆಚರಣೆ ಮಾಡಬೇಕು’ ಎಂದು ಗೋವಿನಕೋವಿ ಹಾಲಸ್ವಾಮಿ ಮಠದ ಶಿವಯೋಗಿ ಮಹಾಲಿಂಗ ಹಾಲಸ್ವಾಮೀಜಿ ತಿಳಿಸಿದರು.
‘ದೇವಿ ಪುರಾಣ ವಾಚನದಿಂದ ನಮಗೆಲ್ಲರಿಗೂ ನೆಮ್ಮದಿ, ಶಾಂತಿ ದೊರಕುತ್ತದೆ, ಹಿರೇಕಲ್ಮಠದ ನವರಾತ್ರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ದೇವಿಯ ಆಶೀರ್ವಾದದ ಜೊತೆಗೆ ಗುರುವಿನ ದರ್ಶನಾಶೀರ್ವಾದವು ಲಭಿಸುತ್ತದೆ’ ಎಂದು ದೃಷ್ಟಾಂತಗಳ ಮೂಲಕ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಜಿ.ಪ್ರಶಾಂತ್ ನಾಯಕ್ ಅವರು ನವರಾತ್ರಿ ಹಬ್ಬದ ಆಚರಣೆಯ ಬಗ್ಗೆ ಉಪನ್ಯಾಸ ನೀಡಿದರು.
ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು, ಚನ್ನಯ್ಯ ಬೆನ್ನೂರಮಠ, ಎಚ್.ಎಂ.ರುದ್ರೇಶ್, ನಾರಾಯಣ ಪವಾರ್, ಮಲ್ಲಣ್ಣ ಅಂಗಡಿ, ಮೃತ್ಯುಂಜಯ ಪಾಟೀಲ್, ಎನ್.ಪಿ.ಸುರೇಶ್ ಕುಂಬಾರ್, ಸುದೀಪ್, ಅವಿನಾಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.