ADVERTISEMENT

ಹೆಚ್ಚಿದ ಬಸ್‌ಗಳ ಓಡಾಟ

ಹೊಸಪೇಟೆ, ಹುಬ್ಬಳ್ಳಿ, ಬೆಂಗಳೂರು ಮಾರ್ಗದಲ್ಲಿ ಸಂಚಾರ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 5:01 IST
Last Updated 16 ಏಪ್ರಿಲ್ 2021, 5:01 IST
ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟದ ಪ್ರತಿಭಟನೆ ನಡುವೆಯೂ ದಾವಣಗೆರೆಯ ಹೈಸ್ಕೂಲ್‌ ಮೈದಾನದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ವಿವಿಧ ಭಾಗಗಳಿಗೆ ಬಸ್‌ ಸಂಚರಿಸಿದವು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್‌
ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟದ ಪ್ರತಿಭಟನೆ ನಡುವೆಯೂ ದಾವಣಗೆರೆಯ ಹೈಸ್ಕೂಲ್‌ ಮೈದಾನದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ವಿವಿಧ ಭಾಗಗಳಿಗೆ ಬಸ್‌ ಸಂಚರಿಸಿದವು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್‌   

ದಾವಣಗೆರೆ:ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಮುಂದುವರಿದಿದ್ದು, ಜಿಲ್ಲೆಯಲ್ಲಿ ಗುರುವಾರ ಹೆಚ್ಚಿನ ಸಂಖ್ಯೆಯ ಖಾಸಗಿ ಬಸ್‌ಗಳು ಹಾಗೂ ಸಾರಿಗೆ ಬಸ್‌ಗಳು ಓಡಾಟ ನಡೆಸಿದವು. ಇದರಿಂದ ಪ್ರಯಾಣಿಕರು ಕೊಂಚ ನಿಟ್ಟುಸಿರುಬಿಟ್ಟರು.

ಇಲ್ಲಿಯ ಹೈಸ್ಕೂಲ್‌ ಮೈದಾನದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಗುರುವಾರ 50 ಸಾರಿಗೆ ಬಸ್‌ಗಳು ಹರಿಹರ, ಶಿವಮೊಗ್ಗ, ರಾಣೆಬೆನ್ನೂರು, ಚಿತ್ರದುರ್ಗ, ಹೊಸಪೇಟೆ, ಹುಬ್ಬಳ್ಳಿ, ಬೆಂಗಳೂರು ಮಾರ್ಗದಲ್ಲಿ ಸಂಚರಿಸಿದವು.

ಕೆಎಸ್ಆರ್‌ಟಿಸಿ ಅಧಿಕಾರಿಗಳು ಸಿಬ್ಬಂದಿ ಮನವೊಲಿಸಿದ ಕಾರಣ ಹೆಚ್ಚಿನ ಬಸ್‌ಗಳು ರಸ್ತೆಗೆ ಇಳಿದವು. ಖಾಸಗಿ ಬಸ್‌ ನಿಲ್ದಾಣದಲ್ಲಿ ಹೆಚ್ಚಿನ ಜನಜಂಗುಳಿ ಇತ್ತು.

ADVERTISEMENT

ಹೆಚ್ಚಿನ ಸೀಟು ಆಗದ ಕಾರಣ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಿಯೋಜನೆ ಮೇಲೆ ಇದ್ದ ಖಾಸಗಿ ಬಸ್‌ಗಳು ತಡವಾಗಿ ‌ಹೊರಟವು. ಇದರಿಂದದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಪರದಾಡಿದರು.

ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ ಸಿಬ್ಬಂದಿ ಹಾಗೂ ಸರ್ಕಾರದ ವಿರುದ್ಧ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.

ನಗರ ಸಾರಿಗೆ ಬಸ್‌ಗಳು ಕಡಿಮೆ ಇದ್ದ ಕಾರಣ ನಗರ ನಿವಾಸಿಗಳು ಆಟೊ, ಬೈಕ್‌ಗಳ ಮೊರೆ ಹೋದರು.

65 ಸಿಬ್ಬಂದಿ ಹಾಜರು: ಗುರುವಾರ 65 ಸಾರಿಗೆ ಸಿಬ್ಬಂದಿ ಕೆಲಸಕ್ಕೆ ಹಾಜರಾದರು. ಅಧಿಕಾರಿಗಳು ಸಿಬ್ಬಂದಿ ಮನವೊಲಿಸುವ ಕಾರ್ಯ ಮುಂದುವರಿಸಿದ್ದಾರೆ.

‘ಗುರುವಾರ ಹೆಚ್ಚಿನ ಬಸ್‌ಗಳು ಸಂಚರಿಸಿದವು. ಸಿಬ್ಬಂದಿ ಹಾಜರಾಗುವ ವಿಶ್ವಾಸ ಇದ್ದು, ನಾಳೆಯೂ ಹೆಚ್ಚಿನ ಬಸ್‌ಗಳನ್ನು ಓಡಿಸಲಾಗುವುದು. 9 ದಿನಗಳಿಂದ ಸಾರಿಗೆ ಸಂಸ್ಥೆಗೆ₹ 3 ಕೋಟಿ ನಷ್ಟವಾಗಿದೆ. ಸಿಬ್ಬಂದಿ ಬಂದರೆ ನಗರ ಸಾರಿಗೆ ಬಸ್‌ಗಳನ್ನೂ ಓಡಿಸುತ್ತೇವೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಎನ್‌. ಹೆಬ್ಬಾಳ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡು ದಿನಗಳಿಂದ ಪ್ರಯಾಣಿಕರ ಸಂಖ್ಯೆ ಕೊಂಚ ಹೆಚ್ಚಿದೆ. ಇದು ಸಮಾಧಾನ ತಂದಿದೆ. ನಮ್ಮ ಸಾಮಾನ್ಯ ಮಾರ್ಗದಲ್ಲೇ ಬಸ್‌ ಓಡಿಸುತ್ತಿದ್ದೇವೆ. ಹೆಚ್ಚಿನ ಬದಲಾವಣೆ ಆಗಿಲ್ಲ’ ಎಂದರು ಖಾಸಗಿ ಬಸ್‌ ಏಜೆಂಟ್‌ ಪ್ರವೀಣ್‌.

‘ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳು ಇವೆ. ಆದರೆ ಅವರು ಹೆಚ್ಚಿನ ದರ ನಿಗದಿ ಮಾಡಿದ್ದಾರೆ. ಈ ಬಗ್ಗೆ ಕೇಳಿದರೆ ಬಸ್‌ ಇಲ್ಲವಲ್ಲ ಸರ್‌ ಅದಕ್ಕೆ ಎನ್ನುತ್ತಾರೆ. ಕೆಎಸ್‌ಆರ್‌ಟಿಸಿ ಸಿಬ್ಬಂದಿಯನ್ನು ಕೇಳಿದರೆ ಜನರಿಗೆ ಅನುಕೂಲ ಕಲ್ಪಿಸಲು ನಾವು ನಿಲ್ದಾಣದಲ್ಲಿ ಬಸ್‌ ನಿಲ್ಲಿಸಲು ಸೂಚಿಸಿದ್ದೇವೆ. ಅವರ ಹೆಚ್ಚಿನ ದರ ನಿಗದಿ ಮಾಡಿದರೆ, ತಡವಾಗಿ ಬಸ್‌ ಓಡಿಸಿದರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು ಹುಬ್ಬಳ್ಳಿಗೆ ಹೊರಟಿದ್ದ ಪ್ರಯಾಣಿಕ ರವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.