
ವಿಶ್ವಪ್ರಿಯತೀರ್ಥ ಸ್ವಾಮೀಜಿ
ದಾವಣಗೆರೆ: ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಎಂಬ ಭಜನೆಯನ್ನು ಮಹಿಳೆಯರು ನಿತ್ಯ ಮಾಡುತ್ತಿರುವುದರಿಂದ ವಿಶ್ವದ ಸಂಪತ್ತು ಭಾರತದತ್ತ ಹರಿದು ಬರುತ್ತಿದೆ. ವಿಶ್ವದ ದೊಡ್ಡಣ್ಣ (ಅಮೆರಿಕ) ಶೇ 100ರಷ್ಟು ಸುಂಕ ವಿಧಿಸಿದರೂ ಬಗ್ಗುವ ದೇಶ ಭಾರತ ಅಲ್ಲ’ ಎಂದು ಉಡುಪಿಯ ಆದಮಾರು ಮಠದ ವಿಶ್ವಪ್ರಿಯತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಕೆ.ಬಿ. ಬಡಾವಣೆಯ ರಾಘವೇಂದ್ರಸ್ವಾಮಿ ಮಠದಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ ಶನಿವಾರ ಸಂಸ್ಥಾನ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ‘ಭಾರತದಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ. ಈ ದೇಶವನ್ನು ಏನೂ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ಭಾರತಕ್ಕೆ ನೆರೆಹೊರೆಯ ದೇಶದ ಕಿರಿಕಿರಿ ಇದೆ. ಇನ್ನೊಂದೆಡೆ ಸಂಪನ್ಮೂಲಗಳನ್ನು ಬಳಸುತ್ತ ಭಾರತ ಮಾತೆಗೆ ಕಿರಿಕಿರಿಯುಂಟು ಮಾಡುವ ಶಕ್ತಿಗಳು ದೇಶದ ಒಳಗಿವೆ. ಇಂತಹ ವ್ಯಕ್ತಿಗಳನ್ನು ದೇಶದಿಂದ ಓಡಿಸುವ ಅಥವಾ ಅವರಲ್ಲಿರುವ ದುರ್ಬುದ್ದಿಯನ್ನು ಓಡಿಸುವ ಅಗತ್ಯವಿದೆ’ ಎಂದರು.
‘ದೇಶಕ್ಕೆ ಅಪಾಯ ತಂದೊಡ್ಡುವ ಶಕ್ತಿಗಳ ವಿರುದ್ಧ ಹೋರಾಡುವ ಶಕ್ತಿ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿದೆ. ಶಾಸ್ತ್ರಗಳನ್ನು ಬಲ್ಲ ನರೇಂದ್ರ ಮೋದಿ ಅವರು ದೈವಬಲದಿಂದ ಪ್ರಧಾನಿ ಹುದ್ದೆಯಲ್ಲಿದ್ದಾರೆ’ ಎಂದರು.
ಆಶೀರ್ವಚನಕ್ಕೂ ಮುನ್ನ ರಾಘವೇಂದ್ರಸ್ವಾಮಿಗೆ ಪಂಚಾಮೃತ ಅಭಿಷೇಕ, ಹರಿವಾಯು ಸ್ತುತಿ ಪಾರಾಯಣ ಮತ್ತು ರಾಘವೇಂದ್ರ ಅಷ್ಟೋತ್ತರ ಪಾರಾಯಣ ನಡೆಯಿತು. ‘ರಾಯರ ಮಹಿಮೆ’ ಕುರಿತು ಪಂಡಿತ ಗೋಪಾಲಾಚರ್ ಮಣ್ಣೂರ್ ಹಾಗೂ ‘ರಾಯರು ಉಪನಿಷತ್ಗೆ ನೀಡಿದ ಕೊಡುಗೆ’ ಬಗ್ಗೆ ಉಡುಪಿಯ ಕೃಷ್ಣಾಚಾರ್ಯ ಕುತ್ಪಾಡಿ ಉಪನ್ಯಾಸ ನೀಡಿದರು.
ಶ್ರೀಕೃಷ್ಣ ಮಿತ್ರವೃಂದ ಅಧ್ಯಕ್ಷ ಎಂ.ಎಸ್. ಪ್ರಸಾದ್ ಸಂಯೋಜನೆಯಲ್ಲಿ ‘ಯಕ್ಷಗಾನ-ಪೌರಾಣಿಕ ಪ್ರಸಂಗ’ ಪ್ರಸ್ತುತ ಪಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.