ADVERTISEMENT

ತಪಾಸಣೆ ವೇಳೆ ಆಕಸ್ಮಿಕ ಗುಂಡು ಹಾರಿ ಕಾನ್‌ಸ್ಟೆಬಲ್‌ಗೆ ಗಾಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 4:30 IST
Last Updated 6 ಡಿಸೆಂಬರ್ 2021, 4:30 IST
ಗುಂಡು ತಗುಲಿ ಗಾಯಗೊಂಡಿರುವ ಪೊಲೀಸ್‌ ಕಾನ್‌ಸ್ಟೆಬಲ್‌ ನಾಗರಾಜ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.
ಗುಂಡು ತಗುಲಿ ಗಾಯಗೊಂಡಿರುವ ಪೊಲೀಸ್‌ ಕಾನ್‌ಸ್ಟೆಬಲ್‌ ನಾಗರಾಜ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.   

ನ್ಯಾಮತಿ: ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯ ಸವಳಂಗ ಸರ್ಕಲ್ ಬಳಿ ಭಾನುವಾರ ಮುಂಜಾನೆ ಇಬ್ಬರು ಬೈಕ್ ಸವಾರರ ತಪಾಸಣೆ ಮಾಡಿ ಬಂದೂಕು ವಶಪಡಿಸಿಕೊಳ್ಳುವ ವೇಳೆ ಆಕಸ್ಮಿಕ ಗುಂಡು ಹಾರಿ ಕಾನ್‌ಸ್ಟೆಬಲ್‌ ಗಾಯಗೊಂಡಿದ್ದಾರೆ.

ಕಾನ್‌ಸ್ಟೆಬಲ್‌ನಾಗರಾಜ ಅವರ ಬಲಗೈಗೆ ಗುಂಡು ತಗಲಿದ್ದು, ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಸವಳಂಗ ಸರ್ಕಲ್‌ನಲ್ಲಿ ನಾಕಾಬಂದಿ ನಡೆಸುವಾಗ ಶಿವಮೊಗ್ಗ ಕಡೆಯಿಂದ ಬಂದ ಇಬ್ಬರು ಬೈಕ್ ಸವಾರರನ್ನು ತಪಾಸಣೆ ಮಾಡುತ್ತಿದ್ದಾಗ ಅವರ ಬಳಿಎಸ್‌ಬಿಎಂಎಲ್ ಸಿಂಗಲ್ ಬ್ಯಾರಲ್ ನಾಡ ಬಂದೂಕು ಪತ್ತೆಯಾಯಿತು. ಅವರನ್ನು ವಶಕ್ಕೆ ಪಡೆದು 112 ವಾಹನದಲ್ಲಿ ಬಂದೂಕು ಇಡುವಾಗ ಆಕಸ್ಮಿಕವಾಗಿ ಗುಂಡು ತಗುಲಿದೆ. ಬಂದೂಕು ಲೋಡ್‌ ಆಗಿದ್ದ ಕಾರಣ ಗುಂಡು ಸಿಡಿದಿದೆ’ಎಂದು ಹೊನ್ನಾಳಿ ಸಿಪಿಐ ಟಿ.ವಿ. ದೇವರಾಜ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಾಪುರ ಗ್ರಾಮದ ರಾಜು (20) ಮತ್ತು ಪ್ರಕಾಶನಾಯ್ಕ (32) ಅವರನ್ನು ಬಂಧಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ನ್ಯಾಮತಿ ಸಬ್‌ ಇನ್‌ಸ್ಪೆಕ್ಟರ್ ಪಿ.ಎಸ್. ರಮೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.