ಆಗರಬನ್ನಿಹಟ್ಟಿ(ಚನ್ನಗಿರಿ): ‘ಹೈನುಗಾರಿಕೆ ಸಾವಿರಾರು ವರ್ಷಗಳಿಂದಲೂ ಕೃಷಿಯ ಒಂದು ಭಾಗವಾಗಿದೆ. ಕೇವಲ ಕೃಷಿಯನ್ನೇ ನಂಬಿಕೊಳ್ಳುವ ಬದಲು ಹೈನುಗಾರಿಕೆಯಲ್ಲಿ ತೊಡಗಿ ಹೆಚ್ಚಿನ ಆದಾಯವನ್ನು ಗಳಿಸಲು ಮಹಿಳೆಯರು ಮುಂದಾಗಬೇಕು’ ಎಂದು ಶಿಮುಲ್ ನಿರ್ದೇಶಕ ಎಚ್.ಕೆ. ಬಸಪ್ಪ ತಿಳಿಸಿದರು.
ತಾಲ್ಲೂಕಿನ ಅಗರಬನ್ನಿಹಟ್ಟಿ ಗ್ರಾಮದಲ್ಲಿ ಶನಿವಾರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದಲ್ಲಿ ಶನಿವಾರ ಕ್ಷೀರ ಸಂಜೀವಿನಿ ಯೋಜನೆ ಅಡಿ ಬಡ್ಡಿ ರಹಿತ ಸಾಲದ ಚೆಕ್ಗಳನ್ನು ವಿತರಿಸಿ ಮಾತನಾಡಿದರು.
ಹೈನುಗಾರಿಕೆಯಿಂದ ಕೇವಲ ಹಾಲು ಉತ್ಪಾದನೆ ಅಷ್ಟೇ ಅಲ್ಲದೆ ಮೊಸರು, ಮಜ್ಜಿಗೆ, ಬೆಣ್ಣೆ ಹಾಗೂ ತುಪ್ಪವನ್ನು ಕೂಡಾ ಉತ್ಪಾದನೆ ಮಾಡಬಹುದಾಗಿದೆ. ಹಸುಗಳ ಸಗಣಿ, ಗಂಜಲ ನಿಮ್ಮ ಜಮೀನುಗಳಿಗೆ ಫಲವತ್ತಾದ ಗೊಬ್ಬರವನ್ನು ಪೂರೈಸಿ, ಜಮೀನಿನ ಫಲವತ್ತತೆಯನ್ನು ಹೆಚ್ಚಿಸಿ ಅಧಿಕ ಇಳುವರಿ ಪಡೆಯಲು ಸಹಕಾರಿಯಾಗುತ್ತದೆ ಎಂದರು.
ಯಾವುದೇ ಕಾರ್ಯಗಳಿರಲಿ ಅಲ್ಲಿ ಮಹಿಳೆಯರ ಪಾತ್ರ ತುಂಬಾ ಅವಶ್ಯವಿರುತ್ತದೆ. ಹೈನುಗಾರಿಕೆಯಲ್ಲೂ ಮಹಿಳೆಯರ ಪಾತ್ರ ಇದ್ದು, ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಶಿಮುಲ್ನಿಂದ ಮಹಿಳಾ ಹಾಲು ಉತ್ಪಾದಕರ ಸಂಘಗಳಿಗೆ ಇಂದು ₹ 6.64 ಲಕ್ಷದ ಬಡ್ಡಿ ರಹಿತ ಸಾಲದ ಚೆಕ್ಗಳನ್ನು ವಿತರಿಸಲಾಗಿದೆ. ಮಹಿಳೆಯರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಂಡು ಹೆಚ್ಚಿನ ಹಾಲನ್ನು ಉತ್ಪಾದಿಸಿ, ಅಧಿಕ ಆದಾಯವನ್ನು ಪಡೆದುಕೊಂಡು ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಮುಲ್ ಉಪ ವ್ಯವಸ್ಥಾಪಕ ಸಂಜಯ್, ವಿಸ್ತರಣಾಧಿಕಾರಿ ಕರಿಯಮ್ಮ, ಯೊಜನಾಧಿಕಾರಿ ಗಾಯತ್ರಿ, ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಸಾಕಮ್ಮ, ರಾಕೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.