
ಜಗಳೂರು: ಸರ್ಕಾರ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಪಟ್ಟಣದ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
15 ವರ್ಷಗಳಿಂದ ಲಕ್ಷಾಂತರ ಪದವೀಧರರು, ಸ್ನಾತಕೋತ್ತರ ಪದವೀಧರರು ಸೇರಿದಂತೆ ವಿವಿಧ ಕೋರ್ಸ್ ಪೂರ್ಣಗೊಳಿಸಿ ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.5 ಲಕ್ಷಕ್ಕೂ ಅಧಿಕ ಹುದ್ದೆಗಳಿದ್ದರೂ ನೇಮಕಾತಿ ಪ್ರಕ್ರಿಯೆ ನಡೆಸುತ್ತಿಲ್ಲ. ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಸರ್ಕಾರಗಳು ಕೇವಲ ಭರವಸೆ ನೀಡುತ್ತಿವೆ. ನಿರುದ್ಯೋಗಿಗಳಿಗೆ ವಯೋಮಿತಿ ಮೀರುತ್ತಿದೆ. ಅವರ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ಹುಸಿಯಾಗಿದೆ ಎಂದು ವಿದ್ಯಾರ್ಥಿ ಯುವಜನತೆ ಒಕ್ಕೂಟದ ತಾಲ್ಲೂಕು ಘಟಕದ ಸಂಚಾಲಕ ಧನ್ಯಕುಮಾರ್ ಎಚ್.ಎಂ. ಹೊಳೆ, ಡಿಎಸ್ಎಸ್ ತಾಲ್ಲೂಕು ಘಟಕದ ಸಂಚಾಲಕ ಸತೀಶ್ ಮಲೆಮಾಚಿಕೆರೆ ಆರೋಪಿಸಿದರು.
ಬರದನಾಡು ಜಗಳೂರಿನಲ್ಲಿ ಮಹಿಳೆಯರ ಉದ್ಯೋಗಕ್ಕೆ ಕೈಗಾರಿಕೋದ್ಯಮ ಸ್ಥಾಪಿಸಬೇಕು. ಸ್ನಾತಕೋತ್ತರ ಪದವಿ ಕೇಂದ್ರ, ಡಿಪ್ಲೊಮಾ ಕಾಲೇಜು ತೆರೆದು ವೃತ್ತಿಪರ ಕೋರ್ಸ್ಗಳಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಕರುನಾಡು ನವನಿರ್ಮಾಣ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಮಹಾಲಿಂಗಪ್ಪ ಎಚ್.ಎಂ. ಹೊಳೆ, ಎಐವೈಎಫ್ ರಾಜ್ಯ ಘಟಕದ ಮುಖಂಡ ಮಾದಿಹಳ್ಳಿ ಮಂಜಪ್ಪ, ವಕೀಲ ಆರ್.ಓಬಳೇಶ್, ಎಸ್ಎಫ್ಐ ಜಿಲ್ಲಾ ಘಟಕದ ಸಂಚಾಲಕ ಅನಂತರಾಜ್, ಎಐಎಸ್ಎಫ್ ತಾಲ್ಲೂಕು ಘಟಕದ ಸಂಚಾಲಕ ತೋರಣಗಟ್ಟೆ ಪವನ್, ಸತ್ಯಮೂರ್ತಿ, ಗೋಗುದ್ದು ತಿಪ್ಪೇಸ್ವಾಮಿ, ದೇವಿಕೆರೆ ಸ್ವಾಮಿ ಕುಬೇಂದ್ರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.