ADVERTISEMENT

ದಾವಣಗೆರೆ: ಚಿಕ್ಕಬಿದಿರೆ ರೈತರದು ‘ತಬರ’ನ ಕತೆ

ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಮೀನಮೇಷ, ಜಮೀನು ಮರಳಿ ಪಡೆಯಲು ಹೋರಾಟ

ಜಿ.ಬಿ.ನಾಗರಾಜ್
Published 30 ಸೆಪ್ಟೆಂಬರ್ 2025, 5:04 IST
Last Updated 30 ಸೆಪ್ಟೆಂಬರ್ 2025, 5:04 IST
ಹರಿಹರ ತಾಲ್ಲೂಕಿನ ಚಿಕ್ಕಬಿದಿರೆ ಗ್ರಾಮದಲ್ಲಿ ಭೂಸ್ವಾಧೀನಕ್ಕೆ ಗುರುತಿಸಿದ್ದ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿರುವ ರೈತರು
ಹರಿಹರ ತಾಲ್ಲೂಕಿನ ಚಿಕ್ಕಬಿದಿರೆ ಗ್ರಾಮದಲ್ಲಿ ಭೂಸ್ವಾಧೀನಕ್ಕೆ ಗುರುತಿಸಿದ್ದ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿರುವ ರೈತರು   

ದಾವಣಗೆರೆ: ಖಾಸಗಿ ಕಾರ್ಖಾನೆಯೊಂದರ ಸ್ಥಾಪನೆಗೆ 19 ವರ್ಷಗಳ ಹಿಂದೆ ಅಧಿಸೂಚನೆ ಹೊರಡಿಸಲಾಗಿದ್ದ ಕೃಷಿ ಭೂಮಿಯನ್ನು ಮರಳಿ ನೀಡಲು ಸರ್ಕಾರ ಮೀನ–ಮೇಷ ಎಣಿಸುತ್ತಿರುವುದರಿಂದ ಹರಿಹರ ತಾಲ್ಲೂಕಿನ ಚಿಕ್ಕಬಿದಿರೆ ಗ್ರಾಮದ ರೈತರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಅಲೆದು ‘ತಬರ’ರಂತೆ ಆಗಿದ್ದಾರೆ.

ಚಿಕ್ಕಬಿದಿರೆ ಗ್ರಾಮದ 99 ಎಕರೆ 38 ಗುಂಟೆ ಭೂಸ್ವಾಧೀನಕ್ಕೆ ಕೆಐಎಡಿಬಿ 2006ಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ‘ಕೈಗಾರಿಕೆ ಸ್ಥಾಪನೆಗೆ ಯೋಗ್ಯವಾದ ಪ್ರದೇಶವಲ್ಲ’ ಎಂಬುದು ಖಚಿತವಾದ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ 2019ರಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಈವರೆಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳದಿರುವ ಪರಿಣಾಮ 22 ರೈತ ಕುಟುಂಬಗಳು ಅತಂತ್ರವಾಗಿವೆ. ಭೂಮಿಯ ಮೇಲೆ ಅಧಿಕೃತ ಹಕ್ಕು ಕಳೆದುಕೊಂಡ ಕುಟುಂಬಗಳು ಪರಿಹಾರವೂ ಸಿಗದೇ ತೊಳಲಾಡುತ್ತಿವೆ.

ಎಸ್‌.ಎಸ್‌. ಬಯೋ ಫರ್ಟಿಲೈಸರ್‌ಗೆ ಭೂಸ್ವಾಧೀನ:

ADVERTISEMENT

ಹರಿಹರ ತಾಲ್ಲೂಕಿನ ಚಿಕ್ಕಬಿದಿರೆ ಗ್ರಾಮದಲ್ಲಿ ಎಸ್‌.ಎಸ್‌. ಬಯೋ ಫರ್ಟಿಲೈಸರ್‌ ಕಾರ್ಖಾನೆ ಸ್ಥಾಪನೆಗೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿತ್ತು. ಗ್ರಾಮದ ಸರ್ವೆ ನಂಬರ್‌ 30 ಮತ್ತು 67ರಲ್ಲಿ 38 ಎಕರೆ 15 ಗುಂಟೆ ಸರ್ಕಾರಿ ಹಾಗೂ 61 ಎಕರೆ 23 ಗುಂಟೆ ಖಾಸಗಿ ಜಮೀನಿನ ಭೂಸ್ವಾಧೀನಕ್ಕೆ 2007 ಮೇ 15ರಂದು ಅಂತಿಮ ಅಧಿಸೂಚನೆ ಹೊರಬಿದ್ದಿತ್ತು. ಅಂದಿನಿಂದ ಈವರೆಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ.

‘ಪ್ರತಿ ಎಕರೆಗೆ ಸರ್ಕಾರ ₹ 3 ಲಕ್ಷ ಪರಿಹಾರ ನಿಗದಿಪಡಿಸಿತ್ತು. ಕೈತಪ್ಪಿದ ಭೂಮಿಗೆ ಪರಿಹಾರ ಸಿಗುವ ನಿರೀಕ್ಷೆಯಲ್ಲಿ ಕೆಲ ವರ್ಷ ಉಳುಮೆ ಮಾಡಲಿಲ್ಲ. ಕೆಐಎಡಿಬಿ ಪರಿಹಾರ ನೀಡದೇ ದಿನಗಳನ್ನು ದೂಡುತ್ತ ಕಾಲಹರಣ ಮಾಡಿತು. 2011ರ ಬಳಿಕ ಮತ್ತೆ ಉಳುಮೆ ಮಾಡುತ್ತಿದ್ದೇವೆ. ಮೆಕ್ಕೆಜೋಳ, ತೊಗರಿ, ರಾಗಿ, ಅಡಿಕೆ, ಕಬ್ಬು ಬೆಳೆಯುತ್ತಿದ್ದೇವೆ. ಆದರೆ, ಭೂಮಿಯ ಮೇಲೆ ಸಂಪೂರ್ಣ ಹಕ್ಕಿಲ್ಲ, ಪರಿಹಾರವೂ ಸಿಕ್ಕಿಲ್ಲ’ ಎಂದು ಭೂಮಿ ಕಳೆದುಕೊಂಡ ರೈತ ಎ.ಕೆ. ಮಲ್ಲೇಶಪ್ಪ ಅಳಲು ತೋಡಿಕೊಂಡರು.

ಠೇವಣಿ ಮುಟ್ಟುಗೋಲು: 

ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿ 2008ರ ಫೆ.13ರಂದು ಕೆಐಎಡಿಬಿಗೆ ಹಸ್ತಾಂತರವಾಗಿದೆ. ಭೂಸ್ವಾಧೀನಕ್ಕೆ ಅಗತ್ಯವಿರುವ ಸಂಪೂರ್ಣ ಹಣವನ್ನು ಕೆಐಎಡಿಬಿಯಲ್ಲಿ ಠೇವಣಿ ಮಾಡದ ಪ್ರವರ್ತಕರು, ಕಾರ್ಖಾನೆ ಸ್ಥಾಪನೆಯ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಭೂಸ್ವಾಧೀನಕ್ಕೆ ಕಂಪನಿಯು ಠೇವಣಿ ಮಾಡಿದ ಭಾಗಶಃ ಮೊತ್ತವನ್ನು ಕೆಐಎಡಿಬಿ ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲಿಂದ ಈ ಸಮಸ್ಯೆ ಕಗ್ಗಂಟಾಗಿದೆ.

ಕಾರ್ಖಾನೆ ಸ್ಥಾಪನೆಯ ನಿರ್ಧಾರದಿಂದ ಖಾಸಗಿ ಕಂಪನಿ ಹಿಂದೆ ಸರಿದ ಪರಿಣಾಮ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು 2017ರ ಫೆ.4ರಂದು ನಡೆದ ಕೆಐಎಡಿಬಿಯ 347ನೇ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ನಿಗದಿತ ಭೂಮಿ ಕೆಐಎಡಿಬಿಗೆ ಹಸ್ತಾಂತರವಾಗಿದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡದೇ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಕೆಐಎಡಿಬಿ ಮುಂದಾಯಿತು.

ಕೈಗಾರಿಕೆಗೆ ಯೋಗ್ಯವಲ್ಲದ ಸ್ಥಳ: 

ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಅಭಿವೃದ್ಧಿ ಅಧಿಕಾರಿಗಳ ತಂಡ ಉದ್ದೇಶಿತ ಸ್ಥಳದಲ್ಲಿ 2019ರ ಜುಲೈ 19ರಂದು ಜಂಟಿ ಸಮೀಕ್ಷೆ ನಡೆಸಿತು. ಭೂಸ್ವಾಧೀನಕ್ಕೆ ನಿಗದಪಡಿಸಿದ ಜಮೀನು ರಾಷ್ಟ್ರೀಯ ಹೆದ್ದಾರಿಯಿಂದ ದೂರವಿದ್ದು, ಗುಡ್ಡಗಾಡು ಪ್ರದೇಶ ಹೊಂದಿದ್ದನ್ನು ಗುರುತಿಸಿತು. ಇಳಿಜಾರು ಭೂಮಿಯಾಗಿದ್ದರಿಂದ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲು ಯೋಗ್ಯವಾಗಿಲ್ಲ ಎಂಬ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು.

‘ಈ ವರದಿ ಆಧರಿಸಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚೆಯಾಗಿ ತೀರ್ಮಾನ ಕೈಗೊಳ್ಳಬೇಕು. ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳು ನಿರ್ಧಾರ ಕೈಗೊಳ್ಳಲು ಮೀನ–ಮೇಷ ಎಣಿಸುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಚಿಕ್ಕಬಿದಿರೆ ರೈತರು.

ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ 2019ರಲ್ಲೇ ಪ್ರಸ್ತಾವ ಸಲ್ಲಿಸಲಾಗಿದ್ದು ಸರ್ಕಾರದ ತೀರ್ಮಾನಕ್ಕೆ ಕಾಯುತ್ತಿದ್ದೇವೆ. ಪೌತಿ ಖಾತೆ ಪಾಲು ವಿಭಾಗಕ್ಕೆ ಅವಕಾಶವಿದ್ದು ಅನುಮತಿ ಪಡೆದು ಮುಂದುವರಿಯಬಹುದು
ನಜ್ಮಾ ವಿಶೇಷ ಭೂಸ್ವಾಧೀನಾಧಿಕಾರಿ ಕೆಐಎಡಿಬಿ ದಾವಣಗೆರೆ

ಸಾಲ ಸಿಗುತ್ತಿಲ್ಲ ಪರಭಾರೆ ಆಗುತ್ತಿಲ್ಲ

ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸುತ್ತಿದ್ದಂತೆಯೇ ಕೃಷಿ ಭೂಮಿಯ ಪಹಣಿಯಲ್ಲಿ ಕೆಐಎಡಿಬಿ ಹೆಸರು ನಮೂದಾಗಿದೆ. ಇದರಿಂದ ಜಮೀನಿನ ಮಾಲೀಕರಿಗೆ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಬೆಳೆ ವಿಮೆ ಬೆಳೆ ನಷ್ಟ ಪರಿಹಾರ  ಸಿಗುತ್ತಿಲ್ಲ. ಭೂಮಿಯನ್ನು ಮಾರಾಟ ಮಾಡಲೂ ಅವಕಾಶವಿಲ್ಲದಂತಾಗಿದೆ. ‘ಹಲವು ಬಾರಿ ತಕರಾರು ಅರ್ಜಿ ಸಲ್ಲಿಸಿದ ಪರಿಣಾಮ ಕೆಲ ರೈತರ ಪಹಣಿಯಲ್ಲಿ ಕೆಐಎಡಿಬಿ ಹೆಸರು ರದ್ದಾಗಿದೆ. ಆದರೂ ಭೂ ಪರಭಾರೆ ಪಾಲು ವಿಭಾಗ ಪೌತಿ ಖಾತೆಗೆ ಅವಕಾಶ ಸಿಗುತ್ತಿಲ್ಲ. ಕೆಐಎಡಿಬಿಯ ದಾವಣಗೆರೆ ಹಾಗೂ ಬೆಂಗಳೂರು ಕಚೇರಿಗಳಿಗೆ ಅಲೆದು ಸುಸ್ತಾಗಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರೈತ ಎ.ಕೆ. ಮಲ್ಲೇಶಪ್ಪ.

ಸಂಕಷ್ಟಕ್ಕೆ ಸಿಲುಕಿದ ದಲಿತರು

ಚಿಕ್ಕಬಿದಿರೆ ಗ್ರಾಮದಲ್ಲಿ ಭೂಸ್ವಾಧೀನಕ್ಕೆ ಗುರುತಿಸಿದ 61 ಎಕರೆ 23 ಗುಂಟೆ ಜಮೀನು ಬಹುತೇಕ ದಲಿತರಿಗೆ ಸೇರಿದ್ದು. ದರಖಾಸ್ತು ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಸರ್ಕಾರ ಮಂಜೂರು ಮಾಡಿದ್ದು ಎನ್ನುತ್ತಾರೆ ಗ್ರಾಮಸ್ಥರು. ‘ದಲಿತರಿಗೆ ಸರ್ಕಾರ ನೀಡಿದ ಭೂಮಿ ಹಕ್ಕನ್ನು ಸರ್ಕಾರವೇ ಕಿತ್ತುಕೊಳ್ಳಲು ಪ್ರಯತ್ನಿಸಿದೆ. ರೈತರ ಹೋರಾಟದ ಫಲವಾಗಿ ಈ ಪ್ರಕ್ರಿಯೆ ಸ್ಥಗಿತಗೊಂಡಿದೆ. ಕುಟುಂಬಗಳು ವಿಸ್ತರಣೆಯಾಗಿದ್ದು ಅರ್ಧ 1 ಎಕರೆಯಂತೆ ಹಂಚಿಕೆಯಾಗಿವೆ. 80ಕ್ಕೂ ಹೆಚ್ಚು ಕುಟುಂಬಗಳು ಈ ಭೂಮಿ ನಂಬಿಕೊಂಡಿವೆ. ಆದಷ್ಟು ಬೇಗ ಜಮೀನು ರೈತರಿಗೆ ಹಸ್ತಾಂತರಿಸಿದರೆ ಅನುಕೂಲ’ ಎನ್ನುತ್ತಾರೆ ರೈತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.