ಜಗಳೂರು: ತಾಲ್ಲೂಕಿನ ಕೊಡದಗುಡ್ಡ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ₹ 3 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪದ ನೂತನ ಕಟ್ಟಡ ಕಾಮಗಾರಿಗೆ ಶಾಸಕ ಬಿ.ದೇವೇಂದ್ರಪ್ಪ ಅವರು ಸೋಮವಾರ ಭೂಮಿಪೂಜೆ ನೆರವೇರಿಸಿದರು.
‘ಈ ಹಿಂದೆ ವೀರಭದ್ರೇಶ್ವರ ಸನ್ನಿಧಾನದಲ್ಲಿ ಪಂಚಪೀಠ ಮಠಾಧಿಪತಿ ಸಾನ್ನಿಧ್ಯದಲ್ಲಿ ನೀಡಿದ ಭರವಸೆಯಂತೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ₹ 10 ಲಕ್ಷ ಅನುದಾನ ನೀಡಲಾಗುವುದು. ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವವರಿಗೆ ಅಗತ್ಯವಿರುವ ವ್ಯವಸ್ಥೆ ಮಾಡಲಾಗುವುದು. ನೂತನ ಕಲ್ಯಾಣ ಮಂಟಪದ ಲೋಕಾರ್ಪಣೆಯನ್ನು ಪಂಚ ಪೀಠಾಧಿಪತಿಗಳಿಂದ ಮಾಡಿಸಲಾಗುವುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯ ಬಸವಾಪುರ ರವಿಚಂದ್ರ, ‘ಈವರೆಗೂ ಯಾವುದೇ ಶಾಸಕರ ಬಳಿ ಅನುದಾನ ಪಡೆದಿಲ್ಲ. ಭಕ್ತರೇ ದೇಣಿಗೆ ನೀಡಿ ಸಮುದಾಯ ಭವನ ಸೇರಿ ಇತರೆ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಸ್ವಯಂಪ್ರೇರಿತವಾಗಿ ಶಾಸಕ ಬಿ.ದೇವೇಂದ್ರಪ್ಪ ₹ 10 ಲಕ್ಷ ಅನುದಾನ ಒದಗಿಸಿ ನಮಗೆ ಆನೆ ಬಲ ತುಂಬಿದ್ದಾರೆ. ಶಾಸಕರು ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡಿದರೆ ಭಕ್ತರಿಗೆ ಅನುಕೂಲವಾಗಲಿದೆ’ ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯೆಕ್ಷೆ ರಣದಮ್ಮ ಚಂದ್ರಪ್ಪ, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ, ಉಪಾಧ್ಯಕ್ಷ ಚನ್ನಪ್ಪ, ಕಾರ್ಯದರ್ಶಿ ರುದ್ರಗೌಡ, ಶಿವಕುಮಾರ ಸ್ವಾಮಿ, ಮೆದಿಗಿನಕೆರೆ ವಿರಣ್ಣ ಗೌಡ್ರು, ಗ್ರಾಮ ಪಂಚಾಯಿತಿ ಸದಸ್ಯ ಗುರುಸ್ವಾಮಿ, ಬಂಜಾರ ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ ಪುರುಷೊತ್ತಮ ನಾಯ್ಕ, ಪಿಡಿೊ ಶ್ರೀನಿವಾಸ್, ಮುಖಂಡರಾದ ಶೃಂಗೇಶ್, ಶಿವಕುಮಾರ್ ಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.