ಸಂತೇಬೆನ್ನೂರು: ಕೆಎಸ್ಆರ್ಟಿಸಿಯಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕ ಹಾಗೂ ಭದ್ರತಾ ರಕ್ಷಕ ಹುದ್ದೆಗಳಿಗೆ ಎರಡೂವರೆ ವರ್ಷದ ಹಿಂದೆಯೇ ಅರ್ಜಿ ಹಾಕಿದ್ದ ಅಭ್ಯರ್ಥಿಗಳು ಇಂದಿಗೂ ಅಂತಿಮ ಪಟ್ಟಿ ಆಯ್ಕೆ ಪಟ್ಟಿ ಪ್ರಕಟವಾಗದ ಕಾರಣ ಅತಂತ್ರ ಸ್ಥಿತಿಯಲ್ಲಿದ್ದಾರೆ. ಆಯ್ಕೆ ಪಟ್ಟಿಗೆಚಾತಕ ಪಕ್ಷಿಗಳಂತೆ ಕಾಯುತ್ತಿರುವ ಬಹುತೇಕ ಅಭ್ಯರ್ಥಿಗಳ ವಯೋಮಿತಿ ಮೀರುತ್ತಿದೆ.
ಕೆಎಸ್ಆರ್ಟಿಸಿ ನಿಗಮದ ವಿಭಾಗಮಟ್ಟದ ತಾಂತ್ರಿಕ ಸಹಾಯಕ ನೇರ ನೇಮಕಾತಿಗೆ 2018ರ ಮಾರ್ಚ್ನಲ್ಲಿ 726 ಹುದ್ದೆಗಳಿಗೆ ಹಾಗೂ ಜೂನ್ 2018ರಂದು 200 ಭದ್ರತಾ ರಕ್ಷಕ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 926 ಹುದ್ದೆಗಳಿಗೆ 50 ಸಾವಿರಕ್ಕಿಂತ ಹೆಚ್ಚು ಉದ್ಯೋಗಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು.
‘ಎರಡೂ ವರ್ಗದ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಯಿತು. ಎರಡು ವರ್ಷದ ಸುದೀರ್ಘ ಅವಧಿಯ ನಂತರ 2020ರ ಫೆಬ್ರುವರಿ 2 ರಂದು ಲಿಖಿತ ಪರೀಕ್ಷೆ ನಡೆಯಿತು. ಫೆ.17ರಂದು ಕೆಇಎ ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟಿಸಲಾಯಿತು. ಇನ್ನೇನು 1:5 ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಆಗುವ ನಿರೀಕ್ಷೆಯಲ್ಲಿದ್ದೆವು. ಆದರೆ ಕೋವಿಡ್ ಕಾರಣ ಅಂತಿಮ ಆಯ್ಕೆಪಟ್ಟಿ ಇದುವರೆಗೂ ಬಿಡುಗಡೆ ಮಾಡಿಲ್ಲ’ ಎನ್ನುತ್ತಾರೆ ಅಭ್ಯರ್ಥಿಗಳಾದ ಸುರೇಶ್, ಹುಸೇನ್.
‘ವಯೋಮಿತಿ ಮೀರುತ್ತಿರುವ ಅನೇಕ ಅಭ್ಯರ್ಥಿಗಳು ಹುದ್ದೆ ಲಭಿಸುವ ಭರವಸೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಸಹಾಯವಾಣಿಗೆ ಕರೆ ಮಾಡಿದರೆ ಕೋವಿಡ್ ಕಾರಣ ಅಂತಿಮ ಆಯ್ಕೆ ಪಟ್ಟಿ ಬಗ್ಗೆ ನಿರ್ದಿಷ್ಟವಾಗಿ ಹೇಳುತ್ತಿಲ್ಲ. ₹ 800 ಅರ್ಜಿ ಶುಲ್ಕ ಭರಿಸಿ ಎರಡೂವರೆ ವರ್ಷ ಕಾಯುವುದು ಬಡ ಅಭ್ಯರ್ಥಿಗಳಿಗೆ ಕಷ್ಟ. ಶೀಘ್ರಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಬೇಕು’ ಎಂದು ಒತ್ತಾಯಿಸುತ್ತಾರೆ ಚಿಕ್ಕಬೆನ್ನೂರಿನನಾಗರಾಜ್.
‘ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿರುವ ಕಾರಣ ಉದ್ಯೋಗದ ಭರವಸೆ ಮೂಡಿದೆ. ಶೀಘ್ರ ಆಯ್ಕೆ ಪಟ್ಟಿ ಪ್ರಕಟಿಸಬೇಕು’ ಎಂದುಮಂಜುನಾಥ್ ಚಿಕ್ಕಬ್ಬಿಗೆರೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.