ದಾವಣಗೆರೆ: ‘ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ವಸೂಲಿ ನಿಲ್ಲುವುದಿಲ್ಲ. ಒಂದು ಹುದ್ದೆಯ ಪೋಸ್ಟಿಂಗ್, ವರ್ಗಾವಣೆ ಸಹಿತ ಎಲ್ಲದಕ್ಕೂ ಹಣ ನೀಡಬೇಕು. ಹಣ ನೀಡಿ ಬಂದ ಅಧಿಕಾರಿ ಹಣ ಮಾಡಿಯೇ ಮಾಡುತ್ತಾನೆ. ಹಾಗಾಗಿ ಇನ್ನಾದರೂ ರಾಜಕಾರಣಿಗಳು ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಗೆ ಈ ವಸೂಲಾತಿಯಿಂದ ವಿನಾಯಿತಿ ನೀಡಬೇಕು’ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಹೇಳಿದರು.
ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಭಾನುವಾರ ಮಾತನಾಡಿದರು.
ಕಾನೂನು ವಿಭಾಗದ ನ್ಯಾಯಾಂಗ, ವಕೀಲಿಕೆ, ಪೊಲೀಸ್ ಮತ್ತು ಜೈಲು ಸರಿಯಾಗಿ ಕಾರ್ಯನಿರ್ವಹಿಸಬೇಕು. ಅಮೆರಿಕ, ಫ್ರಾನ್ಸ್, ಜಪಾನ್ ಸಹಿತ ಮುಂದುವರಿದ ದೇಶಗಳಲ್ಲಿ ಅಧ್ಯಕ್ಷರ ಮಗನೇ ತಪ್ಪು ಮಾಡಿದರೂ ದಂಡ ವಿಧಿಸಲಾಗುತ್ತದೆ. ಭಾರತದಲ್ಲಿ ಸೈಕಲ್ ಕಳ್ಳರಿಗೆ, ಬಡವರಿಗೆ ಅಷ್ಟೇ ಶಿಕ್ಷೆ, ದಂಡ ಆಗುತ್ತದೆ. ಕೋಟ್ಯಂತರ ರೂಪಾಯಿ ವಂಚನೆ ಮಾಡಿದವರಿಗೆ ಶಿಕ್ಷೆಯಾಗುವುದಿಲ್ಲ.ಕಾನೂನು ವ್ಯವಸ್ಥೆಯನ್ನು ನಿರ್ಭೀತಿಯಿಂದ, ನಿಷ್ಪಕ್ಷಪಾತವಾಗಿ, ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸಹಿತ ಯಾರೇ ಅಧಿಕಾರಕ್ಕೆ ಬಂದರೂ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಾರೆ ಎಂದಾದರೆ ಅದು ಬರೀ ಭ್ರಮೆ ಎಂದು ವಿಷಾದ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.