ADVERTISEMENT

ಚಿಕ್ಕಬಿದರೆ: ಚಿರತೆ ಸೆರೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 14:17 IST
Last Updated 8 ಸೆಪ್ಟೆಂಬರ್ 2021, 14:17 IST
ಹರಿಹರ ತಾಲ್ಲೂಕಿನ ಚಿಕ್ಕಬಿದರೆ ಗ್ರಾಮದಲ್ಲಿ ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿ ಅಳವಡಿಸಿದ್ದ ಬೋನಿಗೆ ಬಿದ್ದ ಚಿರತೆ
ಹರಿಹರ ತಾಲ್ಲೂಕಿನ ಚಿಕ್ಕಬಿದರೆ ಗ್ರಾಮದಲ್ಲಿ ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿ ಅಳವಡಿಸಿದ್ದ ಬೋನಿಗೆ ಬಿದ್ದ ಚಿರತೆ   

ಹರಿಹರ:ತಾಲ್ಲೂಕಿನ ಚಿಕ್ಕಬಿದರೆ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಕೆಲ ತಿಂಗಳುಗಳಿಂದ ಆತಂಕ ಮೂಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಸೆರೆ ಹಿಡಿದರು. ಇದರಿಂದ ಗ್ರಾಮಸ್ಥರು ನಿರಾಳರಾದರು.

ಜೂನ್‍ ತಿಂಗಳ ಅಂತ್ಯದಲ್ಲಿ 2 ಕುರಿಮರಿಗಳನ್ನು ಚಿರತೆ ಹೊತ್ತೊಯ್ದಿತ್ತು. ಇದರಿಂದ ಬೆಚ್ಚಿಬಿದ್ದಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಜುಲೈ ಆರಂಭದಿಂದ ಚಿರತೆ ಸೆರೆಗೆ ಬೋನು ಇಡುವ ಮೂಲಕ ಅನೇಕ ಬಾರಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದರು. ಆದರೆ ಚಿರತೆ ಸಿಕ್ಕಿರಲಿಲ್ಲ. ಬುಧವಾರ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಚಿರತೆ ಪದೇ, ಪದೇ ಕಾಣಿಸಿಕೊಂಡ ಕಾರಣ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು. ಗ್ರಾಮಸ್ಥರು ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದರು. ರಾತ್ರಿ ವೇಳೆ ಪಟಾಕಿ ಸಿಡಿಸುವ ಮೂಲಕ ಜಾನುವಾರನ್ನು ರಕ್ಷಿಸಿಕೊಳ್ಳುತ್ತಿದ್ದರು. ಚಿರತೆ ಬಂಧಿಸಿದ ಕಾರಣ ಗ್ರಾಮಸ‍್ಥರು ನಿರಾಳರಾಗಿದ್ದಾರೆ.

ADVERTISEMENT

ವಲಯ ಅರಣ್ಯಾಧಿಕಾರಿ ಸುರೇಶ್‍ ಮಾತನಾಡಿ, ‘ಎರಡು ತಿಂಗಳಿಂದ ಚಿರತೆ ಸೆರೆ ಕಾರ್ಯಾಚರಣೆ ನಡೆದಿತ್ತು. ಅನೇಕ ಜಾಗಗಳಲ್ಲಿ ಬೋನನ್ನು ಅಳವಡಿಸಿ ಸತತ ನಿಗಾವಹಿಸಲಾಗಿತ್ತು. ಮಂಗಳವಾರ ತಡರಾತ್ರಿ ಮೇಕೆ ಮರಿ ಕಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಚಿರತೆಯನ್ನು ಆನಗೋಡಿನ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಮಹಮದ್‍ ಖಾಲೀದ್‍, ಸಿಬ್ಬಂದಿ ವೆಂಕಟೇಶ್‍, ಮಾಲತೇಶ್‍, ಸುರೇಶ್‍, ರಾಮಸಿಂಗ್‍, ಬಸವರಾಜ್‍ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.