ದಾವಣಗೆರೆ: ‘ನಾವು ಹಣ ಪಡೆದು ಬಿಜೆಪಿಗೆ ಹೋಗಿದ್ದೇವೆ ಎಂದು ಆರೋಪ ಮಾಡುವವರು ಅದನ್ನು ಸಾಬೀತು ಮಾಡಲಿ. ಇಲ್ಲದೇ ಇದ್ದರೆ ಅವರೂ ಧರ್ಮಸ್ಥಳಕ್ಕೆ ಬರಲಿ, ನಾವೂ ಬರ್ತೇವೆ. ಆಣೆ ಮಾಡಿ ಹೇಳಲಿ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಸವಾಲು ಹಾಕಿದರು.
ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವು ಯಾವುದೇ ಆಮಿಷಕ್ಕೆ ಹೋಗುವ ಜಾಯಮಾನದವರಲ್ಲ. ಇದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಗೊತ್ತಿದ್ದೂ ಸುಳ್ಳು ಮಾತನಾಡಿದರೆ ಅದಕ್ಕೇನು ಅನ್ನಬೇಕು. ನಾವು ಸ್ವಾಭಿಮಾನಕ್ಕಾಗಿ ಕಾಂಗ್ರೆಸ್ ಬಿಟ್ಟು ಬಂದವರೇ ಹೊರತು ರಾಜಕಾರಣಕ್ಕಾಗಿ ಅಲ್ಲ’ ಎಂದು ತಿಳಿಸಿದರು.
‘ಅಧಿಕಾರದ ಲಾಲಸೆಯಿಂದ ಈ ರೀತಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಈಗ ಕಾಂಗ್ರೆಸ್ನವರು 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಡುವುದಾಗಿ ಹೇಳುತ್ತಿದ್ದಾರೆ. ಅವರು ಅಧಿಕಾರದಲ್ಲಿ ಇರುವಾಗ ಯಾಕೆ ಕೊಟ್ಟಿಲ್ಲ. ಆಗ ಪಡಿತರದಲ್ಲಿ ನೀಡುವ ಅಕ್ಕಿ ಕಡಿಮೆ ಮಾಡಿದ್ದರು. ನಾವು ನಾಲ್ಕೈದು ಶಾಸಕರು ಗಲಾಟೆ ಮಾಡಿದ ಬಳಿಕ ಅಕ್ಕಿ ಕಡಿಮೆ ಮಾಡದೇ ನೀಡಿದ್ದರು’ ಎಂದು ಆರೋಪಿಸಿದರು.
40 ಪರ್ಸೆಂಟ್ ಆರೋಪ ಮಾಡಿದವರು ಜಾಮೀನಿನಲ್ಲಿದ್ದಾರೆ. ಅವರ ಆರೋಪದಲ್ಲಿ ಸತ್ಯ ಇದ್ದರೆ ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.