ADVERTISEMENT

ಔಷಧದ ವೆಚ್ಚ ಕಡಿಮೆ ಮಾಡುವ ಪ್ರಯತ್ನವಾಗಲಿ

ಜೈವಿಕ ತಂತ್ರಜ್ಞಾನದಲ್ಲಿನ ತಂತ್ರಗಳ ಕುರಿತು ಕಾರ್ಯಾಗಾರದಲ್ಲಿ ಪ್ರೊ.ವೃಷಭೇಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 14:35 IST
Last Updated 9 ಮಾರ್ಚ್ 2020, 14:35 IST
ಜೈವಿಕ ತಂತ್ರಜ್ಞಾನದಲ್ಲಿನ ತಂತ್ರಗಳ ಕುರಿತು ದಾವಣಗೆರೆ ಬಿಐಟಿಯಲ್ಲಿ ಸೋಮವಾರ ನಡೆದ ಕಾರ್ಯಾಗಾರವನ್ನು ಅತಿಥಿಗಳು ಉದ್ಘಾಟಿಸಿದರು
ಜೈವಿಕ ತಂತ್ರಜ್ಞಾನದಲ್ಲಿನ ತಂತ್ರಗಳ ಕುರಿತು ದಾವಣಗೆರೆ ಬಿಐಟಿಯಲ್ಲಿ ಸೋಮವಾರ ನಡೆದ ಕಾರ್ಯಾಗಾರವನ್ನು ಅತಿಥಿಗಳು ಉದ್ಘಾಟಿಸಿದರು   

ದಾವಣಗೆರೆ: ಅಪರೂಪದ ರೋಗಗಳ ಔಷಧ ವೆಚ್ಚ ದುಬಾರಿಯಾಗಿದೆ. ಕಡಿಮೆ ವೆಚ್ಚದಲ್ಲಿ ಹೇಗೆ ಔಷಧ ಒದಗಿಸಬಹುದು ಎಂಬುದರ ಬಗ್ಗೆಯೂ ಬಯೋ ಟೆಕ್ನಾಲಜಿ ಎಂಜಿನಿಯರ್‌ಗಳು ಗಮನಹರಿಸಬೇಕು ಎಂದು ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಸಲಹೆ ನೀಡಿದರು.

ಜೈವಿಕ ತಂತ್ರಜ್ಞಾನದಲ್ಲಿನ ತಂತ್ರಗಳ ಕುರಿತು ಬಿಐಟಿಯಲ್ಲಿ ಸೋಮವಾರ ನಡೆದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತದಲ್ಲಿ ಏಳು ಸಾವಿರ ಅಪರೂಪದ ರೋಗಗಳಿವೆ. ಇವುಗಳನ್ನು ಕೆ7 ಎಂದು ಗುರುತಿಸಲಾಗಿದೆ. ಒಂದೊಂದು ರೋಗಗಳ ವೆಚ್ಚವೂ ₹ ಲಕ್ಷ ದಾಟುತ್ತಿದೆ. ಔಷಧ ತಯಾರಿಯ ವೆಚ್ಚ ಕಡಿಮೆ ಮಾಡಿದರೆ ರೋಗಿಗಳಿಗೆ ಕಡಿಮೆಯಲ್ಲಿ ಒದಗಿಸಲು ಸಾಧ್ಯ. ಭವಿಷ್ಯದ ಆರೋಗ್ಯ ಸೇವೆ ಜೈವಿಕ ತಂತ್ರಜ್ಞಾನದ ಎಂಜಿನಿಯರ್‌ಗಳ ಕೈಯಲ್ಲಿದೆ ಎಂದು ಹೇಳಿದರು.

ADVERTISEMENT

ಕಾರ್ಗಿಲ್‌ ಇಂಡಿಯಾದ ಬಸವರಾಜ್‌ ಅಂಗಡಿ, ‘ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಇದೆ. ಸ್ಪರ್ಧೆಯನ್ನು ಎದುರಿಸಲು ಕಾರ್ಯಾಗಾರ, ತರಬೇತಿಗಳ ಮೂಲಕ ಶಸಕ್ತರಾಗಬೇಕು. ಪ್ರಾಯೋಗಿಕ ಜ್ಞಾನದಿಂದ ದಕ್ಷವಾಗಿ ಕಾರ್ಯ ನಿರ್ವಹಿಸಲು ಸಾಧ್ಯ’ ಎಂದರು ತಿಳಿಸಿದರು.

ಜೀವನ ಎಂದೂ ನಿಂತ ನೀರಲ್ಲ. ಕಲಿಯುವಿಕೆಗೆ ಎಂದೂ ಕೊನೆಯಿಲ್ಲ. ಏಕಲವ್ಯನ ಛಲ ಎಲ್ಲರ ಸಾಧನೆಗೆ ಸ್ಫೂರ್ತಿಯಾಗಬೇಕು ಎಂದರು.

ದಾವಣಗೆರೆ ವಿಶ್ವವಿದ್ಯಾಲಯದ ಬಯೊಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ. ಎಸ್.ಎಂ. ಗೋಪಿನಾಥ್, ‘ಶೈಕ್ಷಣಿಕ ಕಲಿಕೆ ಹಾಗೂ ಕೈಗಾರಿಕಾ ಅಗತ್ಯಗಳ ನಡುವಿನ ಅಂತರವನ್ನು ಸರಿದೂಗಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಉದ್ಯಮಗಳು ಬಯಸುವ ಕೌಶಲಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಸದಾಶಿವಪ್ಪ, ‘ಹಿಂದಿನ ವ್ಯವಸ್ಥೆಯಲ್ಲಿ ಬಾಯಿಪಾಠ, ಅರ್ಥ ಮಾಡಿಕೊಳ್ಳುವುದು ಹಾಗೂ ಅನ್ವಯಿಸುವುದಕ್ಕೆ ಶಿಕ್ಷಣ ಸೀಮಿತವಾಗಿತ್ತು. ಈಗ ವಿಶ್ಲೇಷಣೆ, ಮೌಲ್ಯಮಾಪನ ಹಾಗೂ ಸೃಜನಶೀಲತೆಯನ್ನು ಬಯಸುತ್ತಿದೆ’ ಎಂದು ಹೇಳಿದರು.

ಡಾ.ಬಿ.ಇ. ರಂಗಸ್ವಾಮಿ ಸ್ವಾಗತಿಸಿದರು. ಪೂಜಾ ಬಿ.ಎಸ್‌. ವಂದಿಸಿದರು. ನಿಹಾರಿಕಾ ರೆಡ್ಡಿ ಮತ್ತು ಸಹನಾ ಗೌಡರ್‌ ಕಾರ್ಯಕ್ರಮ ನಿರೂಪಿಸಿದರು.

‘ಕೋವಿಡ್‌ 19ಗೆ ಔಷಧ ಕಂಡುಕೊಳ್ಳಬೇಕು’

ಕೊರೊನಾ ವೈರಸ್‌ನಿಂದ ಬರುವ ‘ಕೋವಿಡ್‌ 19’ ಸೋಂಕಿಗೆ ಇನ್ನೂ ಔಷಧ ಕಂಡು ಹಿಡಿದಿಲ್ಲ. ಈ ವೈರಸ್‌ ಬಂದ ಮೇಲೆ ಜೈವಿಕ ತಂತ್ರಜ್ಞಾನ ಸಂಶೋಧಕರಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಪ್ರೊ. ವೃಷಭೇಂದ್ರಪ್ಪ ತಿಳಿಸಿದರು.

ಫಾಸ್ಟ್‌ಫುಡ್, ತಂಪು ಪಾನೀಯಗಳನ್ನು ಬಿಟ್ಟುನಿಂಬೆರಸವನ್ನು ಸೇವಿಸಿದರೆ ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿದ್ದರೆ ಕೋವಿಡ್‌ 19 ಸಹಿತ ಯಾವುದೇ ರೋಗಗಳಿಂದ ದೂರ ಇರಲು ಸಾಧ್ಯ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.