
ಮಲೇಬೆನ್ನೂರು: ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದಿಂದ ಪಟ್ಟಣದ ಹೃದಯಭಾಗದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ– 25ರಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಯನ್ನು ಶಾಸಕ ಬಿ.ಪಿ. ಹರೀಶ್ ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಪಟ್ಟಣದಲ್ಲಿ ₹ 63 ಕೋಟಿ ವೆಚ್ಚದ ಅಮೃತ್ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ರಸ್ತೆ ಅಗೆಯಲು ಅನುಮತಿಗಾಗಿ ಲೋಕೋಪಯೋಗಿ ಇಲಾಖೆಗೆ ಮನವಿ ನೀಡಿ 5 ತಿಂಗಳು ಕಳೆದರೂ ಅನುಮತಿ ನೀಡಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿತು.
‘ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಉಂಟಾಗಿರುವುದು ಗೊತ್ತಾಯಿತು. ಇದು ರಸ್ತೆ ನಿರ್ಮಾಣ ಕಾಮಗಾರಿಗೆ ಅಡ್ಡಿಯಾಗಲಿದೆ’ ಎಂದು ಪುರಸಭೆ ಸದಸ್ಯ ಸಿದ್ದೇಶ್, ಕೆ.ಜಿ. ಲೋಕೇಶ್, ಮುಖಂಡರಾದ ಜಿಗಳಿ ಹನುಮಗೌಡ, ಮಂಜಣ್ಣ, ಕುಮಾರ್ ಹಾಗೂ ನಾಗರಿಕರು ಆತಂಕ ವ್ಯಕ್ತಪಡಿಸಿದರು.
ತಕ್ಷಣ ಶಾಸಕರು ಲೋಕೋಪಯೋಗಿ ಇಲಾಖೆ ಎಇಇಗೆ ಕರೆ ಮಾಡಿ ತುರ್ತಾಗಿ ಅನುಮತಿ ನೀಡಲು ಸೂಚಿಸಿದರು. ಸ್ವಲ್ಪ ಸಮಯದ ನಂತರ ಪೈಪ್ ಅಳವಡಿಕೆ ಕೆಲಸ ಕೂಡ ಆರಂಭವಾಗಿದ್ದು ವಿಶೇಷ.
‘₹ 3 ಕೋಟಿ ವೆಚ್ಚದಲ್ಲಿ 11 ಮೀ. ಅಗಲದ ರಸ್ತೆ ಡಾಂಬರೀಕರಣ, ಹಾಳಾದ ಭಾಗದಲ್ಲಿ ಚರಂಡಿ, 26 ವಿದ್ಯುತ್ ಕಂಬದೊಂದಿಗೆ ದೀಪ ಅಳವಡಿಸುವುದು, ವಾಹನ ನಿಲುಗಡೆ, ಪಾದಚಾರಿ ರಸ್ತೆ ಹಾಗೂ 6 ಕಡೆ ರಸ್ತೆ ಉಬ್ಬು ಅಳವಡಿಸಲು ಯೋಜನೆ ರೂಪಿಸಲಾಗಿದೆ. ಯಾವುದೇ ಕಾರಣಕ್ಕೂ ರಸ್ತೆ ನಿರ್ಮಾಣದ ನಂತರ ಅಗೆಯಲು ಅವಕಾಶ ಇಲ್ಲ’ ಎಂದು ಎಂಜಿನಿಯರ್ ಚೇತನ್ ನಕಾಶೆಯೊಂದಿಗೆ ಸವಿವರ ಮಾಹಿತಿ ನೀಡಿದರು.
‘ರಸ್ತೆ ಸಂಪೂರ್ಣ ಹಾಳಾಗಿದೆ. ನಾಗರಿಕರು, ವಾಹನ ಸವಾರರು ತೊಂದರೆ ಅನುಭವಿಸಿ ಬೇಸತ್ತಿದ್ದಾರೆ. ನಿರ್ಮಾಣ ಕಾರ್ಯ ತ್ವರಿತವಾಗಿ ಮಾಡಿ ಮುಗಿಸಿ’ ಎಂದು ಶಾಸಕರು ಗುತ್ತಿಗೆದಾರರಿಗೆ ಸೂಚಿಸಿದರು. ಲೋಕೋಪಯೋಗಿ ಇಲಾಖೆ ಎಂಜಿನಿಯರ್ಗಳಾದ ಗುರುಪಾದ ಸ್ವಾಮಿ, ನಿರಂಜನ್ ಗುತ್ತಿಗೆದಾರ ಶಿವಾ ರೆಡ್ಡಿ, ನಾಗರಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.