
ಮಲೇಬೆನ್ನೂರು: ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಚುನಾವಣಾ ಸಿಬ್ಬಂದಿ ಮತಗಟ್ಟೆಗಳಿಗೆ ಭೇಟಿ ನೀಡಿ ಶುಕ್ರವಾರ ಪರಿಶೀಲನೆ ನಡೆಸಿದರು.
ಬಹುತೇಕ ಮತಗಟ್ಟೆಗಳಿಗೆ ವಿದ್ಯುತ್ ನೀರಿನ ಪೂರೈಕೆ ಇರಲಿಲ್ಲ. ಕೆಲವೆಡೆ ಆರ್ಸಿಸಿಯ ಕೆಳಪದರ ಕಿತ್ತುಬಂದಿದ್ದು, ಬಾಗಿಲು ಕಿಟಕಿ ಹಾಳಾಗಿದ್ದವು. ವಿದ್ಯುತ್ ಪೂರೈಸುವ ಕೇಬಲ್ ತುಂಡಾಗಿದ್ದವು. ಸ್ವಿಚ್, ಪಿನ್ ಮುರಿದು ಹೋಗಿದ್ದವು. ಆದರೆ, ಪೀಠೋಪಕರಣ, ಶೌಚಾಲಯ, ಇಳಿಜಾರು ಮೆಟ್ಟಿಲು, ವಿಶ್ರಾಂತಿ ಕೊಠಡಿ, ಬಹುತೇಕ ಕಡೆ ಸುಸ್ಥಿತಿಯಲ್ಲಿರುವುದು ಕಂಡು ಬಂದಿತು.
ಉಪತಹಶೀಲ್ದಾರ್ ಆರ್.ರವಿ, ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್, ಪರಿಸರ ಎಂಜಿನಿಯರ್ ಉಮೇಶ್ ಸಮಾಲೋಚನೆ ನಡೆಸಿ, ಚಿಕ್ಕಪುಟ್ಟ ದುರಸ್ತಿ ನಡೆಸಿ ಮತದಾನ ಮಾಡಲು ಬರುವ ಜನರಿಗೆ ಅನುಕೂಲವಾಗುವಂತೆ ಮತಗಟ್ಟೆಗಳಿಗೆ ಮೂಲ ಸೌಕರ್ಯ ಒದಗಿಸಲು ಸೂಚಿಸಿದರು.
ಪುರಸಭೆ ಸಂಪನ್ಮೂಲ ಬಳಸಿ ಸಾಧ್ಯವಾದಷ್ಟು ಸಮಸ್ಯೆ ಪರಿಹರಿಸಲಾಗುವುದು ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ಬೂತ್ ಮಟ್ಟದ ಅಧಿಕಾರಿ ಶಿಕ್ಷಕ ನಿರಂಜನ್, ಮುಜೀಬುರ್ ರೆಹಮಾನ್, ಗ್ರಾಮ ಆಡಳಿತ ಅಧಿಕಾರ ಅಣ್ಣಪ್ಪ, ಆರೋಗ್ಯ ನಿರೀಕ್ಷಕ ಶಿವರಾಜ್, ರೈತ ಮುಖಂಡ ಮುದೇಗೌಡರ ತಿಪ್ಪೇಶ್, ಶಿಕ್ಷಕರು, ನಾಗರಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.