ADVERTISEMENT

ದಾವಣಗೆರೆ: ಸ್ವ– ಇಚ್ಛೆಯಿಂದ ವಾಣಿಜ್ಯ ಮಳಿಗೆ, ಕಟ್ಟಡಗಳ ತೆರವು

ಭರದಿಂದ ಸಾಗಿದ ಮಲ್ಪೆ–ಮೊಳಕಾಲ್ಮುರು ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 7:09 IST
Last Updated 5 ಜೂನ್ 2025, 7:09 IST
ಜಗಳೂರಿನ ಪಟ್ಟಣ ಪಂಚಾಯಿತಿಗೆ ಸೇರಿದ ಮಲ್ಪೆ–ಮೊಳಕಾಲ್ಮುರು ಹೆದ್ದಾರಿಗೆ ಹೊಂದಿಕೊಂಡಿರುವ ಸಾಲು ವಾಣಿಜ್ಯ ಮಳಿಗೆಗಳನ್ನು ಒಡೆದು ರಸ್ತೆ ವಿಸ್ತರಣೆ ಕಾಮಗಾರಿಗೆ ಅನುವು ಮಾಡಿಕೊಡಲಾಗಿದೆ 
ಜಗಳೂರಿನ ಪಟ್ಟಣ ಪಂಚಾಯಿತಿಗೆ ಸೇರಿದ ಮಲ್ಪೆ–ಮೊಳಕಾಲ್ಮುರು ಹೆದ್ದಾರಿಗೆ ಹೊಂದಿಕೊಂಡಿರುವ ಸಾಲು ವಾಣಿಜ್ಯ ಮಳಿಗೆಗಳನ್ನು ಒಡೆದು ರಸ್ತೆ ವಿಸ್ತರಣೆ ಕಾಮಗಾರಿಗೆ ಅನುವು ಮಾಡಿಕೊಡಲಾಗಿದೆ    

ಜಗಳೂರು: ಪಟ್ಟಣದಲ್ಲಿ ಹಾದು ಹೋಗಿರುವ ಮಲ್ಪೆ–ಮೊಳಕಾಲ್ಮುರು ರಾಜ್ಯ ಹೆದ್ದಾರಿ ವಿಸ್ತರಣೆ ಸಾರ್ವಜನಿಕರ ದಶಕಗಳ ಬೇಡಿಕೆಯಾಗಿದೆ. ಈಗ ವಿಸ್ತರಣೆಗೆ ಕಾಲ ಕೂಡಿ ಬಂದಿದ್ದು, ಬಹುತೇಕ ವರ್ತಕರು, ಮಳಿಗೆಗಳ ಮಾಲೀಕರು ಸ್ವಯಂ ಇಚ್ಛೆಯಿಂದ ತಮ್ಮ ಕಟ್ಟಡಗಳನ್ನು ತೆರವುಗೊಳಿಸುತ್ತಿದ್ದಾರೆ.

ಪಕ್ಕದ ಚಳ್ಳಕೆರೆ, ಕೊಟ್ಟೂರು, ದಾವಣಗೆರೆ ಮುಂತಾದ ನಗರಗಳಲ್ಲಿ ರಸ್ತೆ ವಿಸ್ತರಣೆಯಾಗಿದ್ದು, ಪಟ್ಟಣದಲ್ಲಿ ಮಾತ್ರ ನನೆಗುದಿಗೆ ಬಿದ್ದಿದ್ದ ವಿಸ್ತರಣೆ ಕಾರ್ಯ ರೂಪಕ್ಕೆ ಬರುತ್ತಿದೆ.

ತಾಲ್ಲೂಕು ಕೇಂದ್ರವಾಗಿರುವ ಪಟ್ಟಣ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದು, ಜನಸಂಖ್ಯೆಯೂ ಹೆಚ್ಚಾಗಿದೆ. ಶಾಲೆ, ಕಾಲೇಜುಗಳು, ಅಂಗಡಿಗಳ ಸಂಖ್ಯೆ ದ್ವಿಗುಣಗೊಂಡಿವೆ. ಇಕ್ಕಟ್ಟಾದ ರಸ್ತೆ ವಾಹನ ದಟ್ಟಣೆಯಿಂದ ಕೂಡಿದ್ದು, ಸಾರ್ವಜನಿಕರು, ಬೈಕ್ ಸವಾರರು, ಪಾದಚಾರಿಗಳು ನಿತ್ಯ ಹಿಂಸೆ ಅನುಭವಿಸುವಂತಾಗಿದೆ. ಆಗಾಗ್ಗೆ ಇಲ್ಲಿ ಅಪಘಾತಗಳು ಸಾಮಾನ್ಯವಾಗಿದ್ದು, ಕೆಲವು ತಿಂಗಳ ಹಿಂದೆ ಪಟ್ಟಣದ ಮಧ್ಯ ಭಾಗದಲ್ಲಿ ಇಬ್ಬರು ಬೈಕ್ ಸವಾರರು ಬಸ್ ಚಕ್ರಗಳಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದು, ನಾಗರಿಕರು ಅಂಗೈಯಲ್ಲಿ ಜೀವ ಹಿಡಿದು ಇಲ್ಲಿ ಓಡಾಡುವ ಸ್ಥಿತಿ ಇದೆ.

ADVERTISEMENT

ಚಳ್ಳಕೆರೆ ರಸ್ತೆಯ ಟೋಲ್ ಗೇಟ್‌ನಿಂದ ಅಂಬೇಡ್ಕರ್ ವೃತ್ತದವರೆಗೆ ರಸ್ತೆಯ ಇಕ್ಕೆಲಗಳ ಕಟ್ಟಡಗಳನ್ನು ತೆರವುಗೊಳಿಸಿ ಹೆದ್ದಾರಿ ವಿಸ್ತರಣೆ ಮಾಡಲು ತಾಲ್ಲೂಕು ಆಡಳಿತ ಮುಂದಾಗಿದೆ. ಪೊಲೀಸ್ ಠಾಣೆ, ಪಶು ಆಸ್ಪತ್ರೆ ಹಾಗೂ ಪಟ್ಟಣ ಪಂಚಾಯಿತಿಗೆ ಸೇರಿದ ವಾಣಿಜ್ಯ ಮಳಿಗೆಗಳನ್ನು ಈಗಾಗಲೇ ಜೆಸಿಬಿ ಯಂತ್ರಗಳಿಂದ ತೆರವುಗೊಳಿಸುವ ಮೂಲಕ ಮೇಲ್ಪಂಕ್ತಿ ಹಾಕಲಾಗಿದೆ.

ರಸ್ತೆ ವಿಸ್ತರಣೆಯನ್ನು ವಿರೋಧಿಸಿ ಪ್ರಾರಂಭದಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ 60ಕ್ಕೂ ಹೆಚ್ಚು ವರ್ತಕರು ಶಾಸಕ ಬಿ. ದೇವೇಂದ್ರಪ್ಪ ಅವರ ನೇತೃತ್ವದಲ್ಲಿ ಈಚೆಗೆ ನಡೆದ ಸಂಧಾನ ಸಭೆಯಲ್ಲಿ ರಸ್ತೆಯ ಮಧ್ಯದಿಂದ 69 ಅಡಿಗೆ ಬದಲಾಗಿ 50 ಅಡಿಯಷ್ಟು ವಿಸ್ತರಣೆ ಮಾಡಲು ಒಪ್ಪಿಕೊಂಡಿದ್ದರು. ಬಹುತೇಕ ವರ್ತಕರು ಸ್ವಯಂ ಇಚ್ಛೆಯಿಂದ ತಮ್ಮ ತಮ್ಮ ಕಟ್ಟಡಗಳನ್ನು ಒಡೆದುಕೊಳ್ಳುತ್ತಿದ್ದಾರೆ.

ಇನ್ನು ಕೆಲವರು ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಾ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಆದರೆ, ವಿಸ್ತರಣೆ ಕಾಮಗಾರಿ ಭರದಿಂದ ಸಾಗಿದ್ದು, ಅನಿವಾರ್ಯವಾಗಿ ಅವರೂ ಮುಂದಿನ ದಿನಗಳಲ್ಲಿ ವಿಸ್ತರಣಾ ಕಾರ್ಯಕ್ಕೆ ಕೈಜೋಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

₹ 20 ಕೋಟಿ ವೆಚ್ಚದ ಕಾಮಗಾರಿ: ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ರಸ್ತೆ ಟೋಲ್‌ವರೆಗೆ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದಿಂದ ₹ 20 ಕೋಟಿ ಅನುದಾನ ಮಂಜೂರಾಗಿದೆ. ಪಾದಚಾರಿ ಮಾಆರ್ಗದಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ಗ್ರಿಲ್ ಮತ್ತು ಟೈಲ್ಸ್‌ ತೆರವುಗೊಳಿಸಿದ್ದು, ರಸ್ತೆ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದೆ.

ಆರಂಭದಲ್ಲಿ ರಸ್ತೆ ವಿಸ್ತರಣಾ ಕಾರ್ಯ ಕೈಗೆತ್ತಿಕೊಂಡಾಗ ಪಟ್ಟಣಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಅಧಿಕಾರಿಗಳು ಮತ್ತು ಸಂಘ–ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಶಾಸಕರ ಜೊತೆಗೂಡಿ ಹೈಕೋರ್ಟ್ ಅಡ್ವೊಕೇಟ್ ಜನರಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ನಂತರದಲ್ಲಿ ವಿಸ್ತರಣಾ ಕಾರ್ಯಕ್ಕೆ ಸಂಬಧಿಸಿದಂತೆ ಒಮ್ಮೆಯೂ ಪಟ್ಟಣಕ್ಕೆ ಅವರು ಭೇಟಿ ಕೊಟ್ಟಿಲ್ಲದಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ರಸ್ತೆ ವಿಸ್ತರಣೆ ಕಾರ್ಯಕ್ಕೆ ವರ್ತಕರೂ ಸ್ಪಂದಿಸಿದ್ದಾರೆ. ಸಂಘ ಸಂಸ್ಥೆಗಳ ಮುಖಂಡರು ಸಾರ್ವಜನಿಕರು ಬೆಂಬಲಿಸುತ್ತಿದ್ದಾರೆ.  ಎಲ್ಲರೂ ಸಹಕರಿಸಬೇಕು.
– ಬಿ. ದೇವೇಂದ್ರಪ್ಪ, ಶಾಸಕ ಜಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.