ADVERTISEMENT

ಗ್ರಾಮೀಣ ಪ್ರದೇಶಗಳ ವಿಶೇಷ ಮಣ್ಣೆತ್ತಿನ ಅಮಾವಾಸ್ಯೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 3:00 IST
Last Updated 9 ಜುಲೈ 2021, 3:00 IST
ನ್ಯಾಮತಿ ಕುಂಬಾರ ಬೀದಿಯಲ್ಲಿ ಗುರುವಾರ ಮಾರಾಟಕ್ಕೆ ಮಣ್ಣಿನಿಂದ ಎತ್ತುಗಳನ್ನು ತಯಾರಿಸುತ್ತಿರುವ ಹೊಸಮನೆ ಚನ್ನೇಶಪ್ಪ
ನ್ಯಾಮತಿ ಕುಂಬಾರ ಬೀದಿಯಲ್ಲಿ ಗುರುವಾರ ಮಾರಾಟಕ್ಕೆ ಮಣ್ಣಿನಿಂದ ಎತ್ತುಗಳನ್ನು ತಯಾರಿಸುತ್ತಿರುವ ಹೊಸಮನೆ ಚನ್ನೇಶಪ್ಪ   

ನ್ಯಾಮತಿ: ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯಿಕ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ. ಇದು ಮುಂಗಾರಿನ ಆರಂಭದ ಹಬ್ಬ ಕೂಡ.

ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ರೈತರು ಪೂಜಿಸಿ ಸಂಭ್ರಮಪಡುವ ಈ ಹಬ್ಬ ಕಾರಹುಣ್ಣಿಮೆಯ ನಂತರ ಬರುತ್ತದೆ. ಭೂತಾಯಿಯನ್ನು ಉಳುವ ಸಂಕೇತವಾದ ಎತ್ತುಗಳನ್ನು ಸಣ್ಣ-ದೊಡ್ಡ ಆಕಾರಗಳಲ್ಲಿ ಕೆಲವರು ಮನೆಯಲ್ಲಿಯೇ ತಯಾರಿಸಿಕೊಳ್ಳುತ್ತಾರೆ. ಇಲ್ಲವೇ ಊರ ಕುಂಬಾರ ಮನೆಗಳಿಂದಲೂ ಮಣ್ಣಿನಿಂದ ತಯಾರಿಸಿದ ಜೋಡಿ ಎತ್ತು, ಹುಲ್ಲು ತಿನ್ನಲು ಗ್ವಾದಲಿ ತರುತ್ತಾರೆ.

‘ರೈತನ ಬಲದ ನೆಲೆಯಿಂದ ಎತ್ತುಗಳನ್ನು ಗಣಪನಂತೆ ಮಣ್ಣಿನಿಂದ ಮಾಡಿ ಪೂಜಿಸಿ ಎತ್ತುಗಳಿಗೆ ದೈವಿ ಸ್ವರೂಪ ಕೊಡುವುದು ನಮ್ಮ ಸಂಪ್ರದಾಯ. ಅದರಂತೆ ದೇವರ ಜಗುಲಿಯ ಮೇಲಿಟ್ಟು ಪೂಜೆ ಮಾಡುತ್ತಾರೆ. ಮಣ್ಣೆತ್ತುಗಳಿಗೆ ಹೂವಿನಿಂದ ಪೂಜಿಸಿ, ಕಾಯಿ, ಕರ್ಪೂರ, ಲೋಭಾನ ಆರತಿ ಮಾಡಿ ವಿವಿಧ ಸಿಹಿ ಪದಾರ್ಥಗಳನ್ನು ನೈವೇದ್ಯ ಮಾಡಿ, ಒಟ್ಟಾಗಿ ಕುಳಿತು ಊಟ ಮಾಡುತ್ತಾರೆ’ ಎನ್ನುತ್ತಾರೆ ನಿವೃತ್ತ ಉಪನ್ಯಾಸಕ ಎಸ್.ಆರ್. ಬಸವರಾಜಪ್ಪ ಮತ್ತು ಡಾ.ಉತ್ತಂಗಿ ಕೊಟ್ರೇಶ.

ADVERTISEMENT

‘ಸಂಜೆ ವೇಳೆಗೆ ಹೊಳೆ, ಕೆರೆ, ಹರಿಯುವ ನೀರಿನ ದಂಡೆಗೆ ಹೋಗಿ ಮಣ್ಣೆತ್ತುಗಳ ಮುಖ ತೊಳೆದು, ವಿಭೂತಿ, ಕುಂಕುಮ ಹಚ್ಚಿ ಆರತಿ ಬೆಳಗಿ, ಮಳೆ, ಬೆಳೆ ಸಮೃದ್ಧಿಗೆ ಬೇಡಿ ಕೊಂಡು ಎತ್ತುಗಳನ್ನು ನೀರಿಗೆ ಬಿಡು ವುದು ಪೂರ್ವಜರ ಕಾಲದಿಂದಲೂ ನಡೆದು ಬಂದಿದೆ’ ಎನ್ನುತ್ತಾರೆ ಕುಂಬಾರಿಕೆ ಕಸುಬುದಾರರಾದ ಚನ್ನೇಶಪ್ಪ ಮತ್ತು ಅರುಣ.

‘ಪೂರ್ವಜರ ಕಾಲದಿಂದಲೂ ಮಣ್ಣೆತ್ತಿನ ಅಮಾವಾಸ್ಯೆ ಪೂಜೆ ಆಚರಿಸಿಕೊಂಡು ಬಂದಿದ್ದೇವೆ. ಈ ಆಚರಣೆಯಿಂದ ಭೂಮಿ ಮತ್ತು ರೈತನಿಗೆ ಬಲ ನೀಡುವ ಎತ್ತುಗಳನ್ನು ಗೌರವಿಸಿದಂತಾಗಿದೆ’ ಎನ್ನುತ್ತಾರೆ ಜೋಗದ ಶಾಂತಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.