ADVERTISEMENT

ಬಸವಾಪಟ್ಟಣ: ಅಕಾಲಿಕ ಮಳೆಗೆ ಚೆಂಡು ಹೂಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2023, 15:37 IST
Last Updated 12 ನವೆಂಬರ್ 2023, 15:37 IST
ಬಸವಾಪಟ್ಟಣದ ಮಹಮದ್ ಅಲಿ ಎಂಬ ರೈತ ಬೆಳೆದಿದ್ದ ಚಂಡು ಹೂ ಕಳೆದ ವಾರ ಬಿದ್ದ ಮಳೆಗೆ ಸಂಪೂರ್ಣ ಹಾಳಾಗಿದೆ
ಬಸವಾಪಟ್ಟಣದ ಮಹಮದ್ ಅಲಿ ಎಂಬ ರೈತ ಬೆಳೆದಿದ್ದ ಚಂಡು ಹೂ ಕಳೆದ ವಾರ ಬಿದ್ದ ಮಳೆಗೆ ಸಂಪೂರ್ಣ ಹಾಳಾಗಿದೆ   

ಬಸವಾಪಟ್ಟಣ: ಕಳೆದ ವಾರ ಈ ಭಾಗದಲ್ಲಿ ಸತತವಾಗಿ 4 ದಿನ ಸುರಿದ ಮಳೆಗೆ ಇಲ್ಲಿನ ರೈತರು ಬೆಳೆದಿದ್ದ ಚೆಂಡು ಹೂ ಬೆಳೆ ಸಂಪೂರ್ಣ ನಾಶವಾಗಿದೆ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಬರುವ ಚೆಂಡು ಹೂಗಳನ್ನು ಸಾಮಾನ್ಯವಾಗಿ ಈ ಭಾಗದ ರೈತರು ಬೆಳೆಯುತ್ತಾರೆ.

ದೊಡ್ಡ ಹಬ್ಬಗಳಾದ ಗಣೇಶ ಚತುರ್ಥಿ, ದಸರಾ ಮತ್ತು ದೀಪಾವಳಿ ಹಬ್ಬಗಳಲ್ಲಿ ಚೆಂಡು ಹೂವಿಗೆ ಹೆಚ್ಚು ಬೇಡಿಕೆ ಇರುವುದರಿಂದ ಸರಿಯಾಗಿ ಈ ತಿಂಗಳುಗಳಲ್ಲಿ ಕೊಯಿಲಿಗೆ ಬರುವಂತೆ ಸಸಿಗಳನ್ನು ನಾಟಿ ಮಾಡುತ್ತೇವೆ. ಈಕಾಲದಲ್ಲಿ ಮುಂಗಾರು ಮಳೆಯ ಕಾಲ ಮುಗಿದಿದ್ದು, ಈಹೂವಿನ ಬೆಳೆಗೆ ಉತ್ತಮ ವಾತಾವರಣ ಇರುತ್ತದೆ. ಆದರೆ, ಈ ವರ್ಷದ ಅಕ್ಟೋಬರ್‌ ಕೊನೆಯವಾರ ಮತ್ತು ನವೆಂಬರ್‌ ಮೊದಲ ವಾರ ಬಿದ್ದ ಮಳೆಗೆ ಗಿಡಗಳು ಕೊಳೆತು ಹೂಗಳು ಕಪ್ಪು ಬಣ್ಣಕ್ಕೆ ತಿರುಗಿ ಫಸಲು ನೆಲ ಕಚ್ಚಿದೆ. ದೀಪಾವಳಿಗೆ ಚೆಂಡುಹೂವಿನ ಅಲಂಕಾರಕ್ಕೆ ಹೆಚ್ಚು ಹೂಗಳನ್ನು ಬಳಸುವುದರಿಂದ ಉತ್ತಮ ಆದಾಯ ಸಿಗಬಹುದು ಎಂದು ಭಾವಿಸಿದ್ದ ನಮಗೆ ಬೆಳೆ ಇಲ್ಲದೇ ನಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ ರೈತ ಮಹಮದ್‌ ಅಲಿ.

ಅಕಾಲಿಕ ಮಳೆಯಿಂದ ಚೆಂಡುಹೂವಿನ ಗಿಡಗಳು ಹಾಳಾಗುವುದರೊಂದಿಗೆ ಗಿಡಗಳಲ್ಲಿದ್ದ ಹೂಗಳು ಕಮರಿ ಚಿಕ್ಕ ಗಾತ್ರವಾಗಿವೆ. ಗ್ರಾಹಕರು ದೊಡ್ಡ ಗಾರದ ಹೂಗಳನ್ನು ಅಪೇಕ್ಷಿಸುತ್ತಾರೆ. ಸಣ್ಣ ಗಾತ್ರದ ಹೂಗಳನ್ನು ಯಾರೂ ಕೊಳ್ಳುವುದಿಲ್ಲ. ದೀಪಾವಳಿಗೆ ಸ್ವಲ್ಪ ಆದಾಯ ದೊರೆಯುತ್ತದೆ ಎಂಬ ಆಸೆಯಿಂದಿದ್ದ ನಮಗೆ ಈಬಾರಿ ನಷ್ಟವಾಗಿದೆ ಎನ್ನುತ್ತಾರೆ ಹೂ ಬೆಳೆಗಾರ ಪಿ.ನೌಷಾದ್‌.

ADVERTISEMENT

ಕಳೆದ ಬಾರಿ 1 ಕೆ.ಜಿ. ಚೆಂಡುಹೂಗೆ ₹50 ದರ ಇತ್ತು. ಈ ಬಾರಿ ಹೂಗಳು ಮಳೆಯಿಂದ ಚಿಕ್ಕದಾಗಿರುವುದರಿಂದ ಬೇಡಿಕೆ ಕಡಿಮೆಯಾಗಿದೆ. ಹಬ್ಬದಲ್ಲೂ ಜನ ಇಂತಹ ಹೂಗಳನ್ನು ಕೊಳ್ಳುತ್ತಿಲ್ಲ. 1 ಎಕರೆಗೆ ₹40 ರಿಂದ ₹50 ಸಾವಿರ ಖರ್ಚು ಮಾಡಿದ್ದೇವೆ. ತೊಡಗಿಸಿದ ಬಂಡವಾಳವೂ ಇಲ್ಲದಂತಾಗಿದೆ. ತಗ್ಗು ಪ್ರದೇಶದ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಚೆಂಡು ಹೂ ಫಸಲು ನಾಶವಾಗಿದೆ ಎನ್ನುತ್ತಾರೆ ರೈತ ಹಾಲಾನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.